ಮಡಿಕೇರಿ, ಸೆ. 8: ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಸಂಬಂಧಿತ ಹಾನಿ ಮತ್ತು ನಷ್ಟದ ಸಮಗ್ರ ಪರಿಶೀಲನೆಗಾಗಿ ಮುಂದಿನ ವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೊಡಗಿಗೆ ಭೇಟಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ 1709 ಮನೆಗಳು ನಷ್ಟವಾಗಿದ್ದು, ಈ ಮನೆಗಳ ಮಾಲೀಕರಿಗೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಿಧಿಯಿಂದ 5.45 ಕೋಟಿ ರೂಪಾಯಿ ಪರಿಹಾರ ಧನ ನೀಡಲಾಗಿದೆ. ಮುಂದಿನ 3 ತಿಂಗಳ ಕಾಲ ರೈತರ ಯಾವದೇ ಸಾಲವನ್ನು ವಸೂಲಿ ಮಾಡದಂತೆಯೂ ಬ್ಯಾಂಕ್ಗಳಿಗೆ ಆದೇಶಿಸಲಾಗಿದೆ. ಕೊಡಗಿನ ರೈತರು ವಿವಿಧ ರೀತಿಯಲ್ಲಿ ಮಾಡಿರುವ 1400 ಕೋಟಿ ರೂಪಾಯಿ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದೂ ಪ್ರತಾಪ್ ಸಿಂಹ ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೊಡಗಿನ ಅತಿವೃಷ್ಟಿ ಪ್ರದೇಶ ವೀಕ್ಷಣೆಗೆ ಬರಬೇಕೆಂಬದು ತಮ್ಮ ಒತ್ತಾಯವೂ ಆಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ರಾಜ್ಯ ಸರಕಾರ ಕೋಳಿ ಗೂಡಿನಂತಹ ಮನೆ ನಿರ್ಮಿಸುವದಕ್ಕೆ ಬಿಡಲಾರೆವು ಎಂದು ಎಚ್ಚರಿಸಿದ ಪ್ರತಾಪ್ ಸಿಂಹ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಲ್ಲಿ ಕನಿಷ್ಟ 10 ಲಕ್ಷ ರೂ. ಮೊತ್ತದಲ್ಲಿ ಅತ್ಯುತ್ತಮ ಗುಣಮಟ್ಟದ ಮನೆ ನಿರ್ಮಾಣಕ್ಕೆ ಬದ್ಧರಿರುವದಾಗಿ ಪ್ರಕಟಿಸಿದರು. ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಎಲ್.ಸಿ. ಎಂ.ಪಿ. ಸುನಿಲ್ ಸುಬ್ರಮಣಿ ಉಪಸ್ಥಿತರಿದ್ದರು.