ವೀರಾಜಪೇಟೆ, ಸೆ. 6: ಗಾಂಧಿನಗರದಲ್ಲಿರುವ ಗಣಪತಿ ಸೇವಾ ಸಮಿತಿಯಿಂದ ಈ ಬಾರಿಯ ಗಣೇಶೋತ್ಸವವನ್ನು ಯಾವದೇ ಆಡಂಬರವಿಲ್ಲದೆ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸುವಂತೆ ತೀರ್ಮಾನಿಸಿರುವದಾಗಿ ಸಮಿತಿಯ ಅಧ್ಯಕ್ಷ ಪಿ.ಎ.ಮಂಜುನಾಥ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾ. 13ರಂದು ಗಣೇಶನನ್ನು ಪ್ರತಿಷ್ಠಾಪಿಸಿ ಅಪರಾಹ್ನ ಹಾಗೂ ರಾತ್ರಿ ಎಂದಿನಂತೆ ಪೂಜಾ ಸೇವೆ, ಯಾವದೇ ಖರ್ಚು ವೆಚ್ಚವಿಲ್ಲದೆ ಸಾಂದರ್ಭಿಕವಾಗಿ ಸಾಂಸ್ಕøತಿಕ ಕಾರ್ಯಕ್ರಮ, ಹನ್ನೊಂದನೇ ದಿನ ರಾತ್ರಿ ಪ್ರಭಾವಳಿಯನ್ನು ಬಳಸದೆ ಸರಳವಾಗಿ ಗಣೇಶನ ಮೂರ್ತಿಯನ್ನು ಸಾಮೂಹಿಕ ಮೆರವಣಿಗೆಯೊಂದಿಗೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುವದು ಎಂದು ತಿಳಿಸಿದರು.

ಗೌರಿ ಗಣೇಶನ ವಿಸರ್ಜನೋತ್ಸವದ ದಿನದ ರಾತ್ರಿ 7ಗಂಟೆಗೆ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ಉತ್ಸವದ ಉಳಿಕೆಯಾದ ಹಣವನ್ನು ಪರಿಹಾರವಾಗಿ ವಿತರಿಸಲಾಗುವದು ಎಂದು ಸಮಿತಿಯ ಕುಯ್ಮಂಡ ರಾಕೇಶ್ ಬಿದ್ದಪ್ಪ ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ನಿತೀನ್, ರಂಜನ್ ನಾಯ್ಡು, ಸಿ. ಗಣಪತಿ, ಪಿ.ಚಂಗಪ್ಪ, ಶಿನೋಜ್, ಪ್ರೀತಿಶ್ ರೈ ಹರ್ಷಗೌಡ ಮತ್ತಿತರರು ಉಪಸ್ಥಿತರಿದ್ದರು.