ಗೋಣಿಕೊಪ್ಪ ವರದಿ, ಆ. 22: ಕೊಡಗಿನಲ್ಲಿ ಜೀವನಾಧಾರಕ್ಕೆ ಬೇಕಾದ ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಹೊರತು ರೈಲ್ವೇ ಮಾರ್ಗದಂತಹ ಮಾರಕ ಯೋಜನೆಗಳು ಬೇಡ ಎಂಬ ಸಂದೇಶವನ್ನು ಇಲ್ಲಿನ ಕಾವೇರಿ ಕಾಲೇಜುವಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಾರಿದರು.
ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಮೀನಾ ಸುಬ್ಬಯ್ಯ ಜ್ಞಾಪಕಾರ್ಥ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕೊಡಗಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಮಾರಕ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದರು.
ಇರುವ ರಸ್ತೆಯ ಗುಣಮಟ್ಟದ ಅಭಿವೃದ್ಧಿಯಾಗಬೇಕಿದೆ. ಬಸ್ ತಂಗುದಾಣ, ಶೌಚಾಗೃಹ, ಗ್ರಾಮೀಣ ರಸ್ತೆ ಅಭಿವೃದ್ಧಿ ಇಂತಹವುಗಳಿಗೆ ಸರ್ಕಾರ ಒತ್ತು ನೀಡಬೇಕು. ರೈಲ್ವೆ, ಹೈಟೆನ್ಷನ್ ಅಂತಹ ಯೋಜನೆಗಳಿಂದ ದೂರವಿರುವಂತೆ ಭಾಷಣದಲ್ಲಿ ಕೋರಿಕೊಂಡರು. ಬಹುತೇಕ ಸ್ಪರ್ಧಿಗಳು ಮಾರಕ ಯೋಜನೆಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದರು. ಜಿಲ್ಲೆಯ ವಿವಿಧ 20 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಕನ್ನಡದಲ್ಲಿ ಆಧುನಿಕ ಯೋಜನೆಗಳು ಕೊಡಗಿನ ಪರಿಸರಕ್ಕೆ ಮಾರಕವೇ’ ಎಂಬ ವಿಷಯದಲ್ಲಿ ಹಾಗೂ ‘ಆಂಗ್ಲಭಾಷೆಯಲ್ಲಿ ಮೈ ರೈಟ್ಸ್ ರೆಸ್ಪಾನ್ಸಿಬಿಲಿಟೀಸ್ ಅಯಿಂಡ್ ಡ್ಯೂಟೀಸ್ ಟುವರ್ಡ್ಸ್ ಮೈ ಮದರ್ ಲ್ಯಾಂಡ್ ವಿತಿನ್ ಫ್ರೇಮ್ ವಕ್ರ್ಸ್ ಆಫ್ ಅವರ್ ಕಾನ್ಸ್ಟಿಟ್ಯೂಷನ್’ ಎಂಬ ವಿಷಯದ ಕುರಿತು ಭಾಷಣ ಏರ್ಪಡಿಸಲಾಗಿತ್ತು.
ಫಲಿತಾಂಶ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಹೆಚ್. ಎನ್. ದರ್ಶನ್ ಪ್ರಥಮ, ಅರ್ವತೊಕ್ಲು ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಎಸ್.ಎಂ. ಪೊನ್ನಮ್ಮ ದ್ವಿತೀಯ, ಆಂಗ್ಲಬಾಷೆಯ ಭಾಷಣ ಸ್ಪರ್ಧೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ವಿದ್ಯಾರ್ಥಿನಿ ಪಿ. ಕೆ. ರಿಯಾ ಪ್ರಥಮ, ಹಳ್ಳಿಗಟ್ಟು ಸಿಐಟಿ ಕಾಲೇಜಿನ ಗ್ರೀಷ್ಮಾ ಗಂಗಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಸಮಗ್ರ ಪ್ರಶಸ್ತಿಯನ್ನು ಅರ್ವತೊಕ್ಲು ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಎಸ್.ಎಂ. ಪೊನ್ನಮ್ಮ ಮತ್ತು ಡಿ.ಟಿ. ಪೊನ್ನಮ್ಮ ಜೋಡಿ ಪಡೆದುಕೊಂಡರು, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ದರ್ಶನ್ ಮತ್ತು ಅಜಿತೇಶ್ ಜೋಡಿ ಪಡೆದುಕೊಂಡಿತು.
ಸನ್ಮಾನ: ಈ ಸಂದÀರ್ಭ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಮಾಜಿ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಕೆ.ಬಿ. ರವಿ ದೇವಯ್ಯ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜು ನಿವೃತ್ತ ಪ್ರಾಂಶುಪಾಲೆ ಪ್ರೊ. ಮಲ್ಚಿರ ಆಶಾ ಅವರುಗಳನ್ನು ಸನ್ಮಾನಿಸಲಾಯಿತು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಸಿ. ಗಣಪತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅತಿಥಿಗಳಾಗಿ ಪಾಲ್ಗೊಂಡರು.
ಈ ಸಂದÀರ್ಭ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಸ್.ಆರ್. ಉಷಾಲತಾ, ಉಪಾಧ್ಯಕ್ಷ ಪ್ರೊ. ಟಿ.ಎಂ.ದೇವಯ್ಯ, ಕಾರ್ಯದರ್ಶಿ ವಾಣಿ ಚಂಗಪ್ಪ, ಸಂಘದ ಸಂಚಾಲಕಿ ಎಸ್.ಎಂ. ರಜನಿ, ಕಾರ್ಯಕ್ರಮ ಸಂಚಾಲಕಿ ಪಿ.ಪಿ. ಸವಿತ, ದಾನಿಗಳಾದ ಪಿ.ಟಿ. ಲಾಲಾ ಪೂಣಚ್ಚ, ಪಿ.ಟಿ. ಸುಭಾಷ್ ಸುಬ್ಬಯ್ಯ, ಪಿ.ಟಿ. ಅಶೋಕ್ ಚಂಗಪ್ಪ, ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಭಾಕರ್, ನಿವೃತ್ತ ಬ್ಯಾಂಕ್ ಅಧಿಕಾರಿ ಅಚ್ಚಯ್ಯ, ನಿವೃತ್ತ ಉಪನ್ಯಾಸಕಿ ಅನಿತ ಗಣಪತಿ ಕಾರ್ಯ ನಿರ್ವಹಿಸಿದರು.