ಮಡಿಕೇರಿ, ಜು.10: ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ವಿಧಾನ ಪರಿಷತ್‍ನಲ್ಲಿ ಹಲವು ಗಮನ ಸೆಳೆಯುವ ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಜ್ಯದಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಹೊರಗುತ್ತಿಗೆಯಿಂದ ನೇಮಕ ಮಾಡಲಾದ ನೌಕರರ ಸಂಖ್ಯೆ ಎಷ್ಟು, ಯಾವ ಯಾವ ಹುದ್ದೆಗಳನ್ನು ಹೊರಗುತ್ತಿಗೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಶಾಸಕರಾದ ಸುನೀಲ್ ಸುಬ್ರಮಣಿ ಅವರು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ್ ಜಾರಕಿಹೊಳಿ ಅವರಿಂದ ಮಾಹಿತಿ ಪಡೆದಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯದ 270 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಪೌರಕಾರ್ಮಿಕರು, ಲೋಡರ್ಸ್, ಡ್ರೈವರ್ಸ್, ಕ್ಲೀನರ್‍ಗಳನ್ನು ಹೊರತುಪಡಿಸಿ, 15047 ಸಂಖ್ಯೆ ಪೌರ ಕಾರ್ಮಿಕರು, 1,288 ವಾಹನ ಚಾಲಕರು, 1835 ಸಹಾಯಕರು ಹಾಗೂ 400 ಸಂಖ್ಯೆ ಲೋಡರ್‍ಗಳಿಂದ ಸ್ವಚ್ಛತಾ ಕೆಲಸಗಳನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಸ್ವಚ್ಛತಾ ಕೆಲಸಗಾರರಿಂದ ನಿರ್ವಹಿಸಬಹು ದಾದಂತಹ ಕೆಲಸಗಳನ್ನು ಹೊರತುಪಡಿಸಿ, ಇನ್ನುಳಿದ ಕೆಲಸಗಳನ್ನು ಪೌರಕಾರ್ಮಿಕರು (ಗುತ್ತಿಗೆ/ನೇರಪಾವತಿ), ವಾಹನ ಚಾಲಕರು, ಸಹಾಯಕರು, ಲೋಡರ್ಸ್, ಮೇಲ್ವಿಚಾರಕರಿಂದ ಎಸ್. ಡಬ್ಲ್ಯೂ.ಎಂ.ನಿಯಮ ಹಾಗೂ ನಾರ್ಮೆಟಿವ್ ಸ್ಟಾಂಡರ್ಡ್‍ಗಳ ಅನುಸಾರ ಅವಶ್ಯಕತೆ ಅನುಗುಣವಾಗಿ ಹೊರಗುತ್ತಿಗೆ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಶೌಚಾಲಯಗಳ ಪ್ರಗತಿ: ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಬಯಲು ಶೌಚಮುಕ್ತ ಪ್ರದೇಶವಾಗಿದೆಯೇ ಎಂಬ ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಸಚಿವರು ರಾಜ್ಯ ಒಟ್ಟು 6022 ಗ್ರಾ.ಪಂ.ಗಳಲ್ಲಿ ಈವರೆಗೆ 4106 ಗ್ರಾಮ ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. 1916 ಗ್ರಾ.ಪಂ.ಗಳು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಬಾಕಿ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ, ಪ್ರವಾಸಿ ಸ್ಥಳಗಳಾದ ಶ್ರೀ ಕ್ಷೇತ್ರ ತಲಕಾವೇರಿ, ಅಬ್ಬಿಫಾಲ್ಸ್, ಇರ್ಪು ಫಾಲ್ಸ್, ನಾಗರಹೊಳೆ, ದುಬಾರೆ, ಚೇಲಾವರ ಫಾಲ್ಸ್ ಮತ್ತು ನಾಲ್ಕು ನಾಡು ಅರಮನೆ ಮುಂತಾದ ಸ್ಥಳಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆಯೇ? ಎಂಬ ಪ್ರಶ್ನೆಗೆ ಕೊಡಗು ಜಿಲ್ಲೆಯಲ್ಲಿ ಹಾದುಹೋಗುವ ಹುಣಸೂರು-ಮಡಿಕೇರಿ-ಪುತ್ತೂರು-ಮಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಹೊರಪಡಿಸಿದಲ್ಲಿ, ಜಿಲ್ಲೆಯ ಇನ್ನಿತರೆ ಎಲ್ಲಾ ಮಾರ್ಗಗಳು ರಾಷ್ಟ್ರೀಕೃತವಾಗದ ವಲಯದಲ್ಲಿರುತ್ತವೆ,

ನಿಗಮದ ಸಾರಿಗೆಗಳ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರಯಾಣಿಕರು ಮತ್ತು ಶಾಲಾ/ ಕಾಲೇಜಿನ ವಿದ್ಯಾರ್ಥಿಗಳ ದೈನಂದಿನ ಸಾರಿಗೆ ಅವಶ್ಯಕತೆಯನ್ನು ಮತ್ತು ಒತ್ತಡವನ್ನು ಗಮನಿಸಿ, ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ, ಅದರಂತೆ ಸಾರಿಗೆ ನಿರ್ವಹಣೆಯ ಮಾರ್ಗ ಮಧ್ಯೆ ಬರುವ ಪ್ರವಾಸಿ ತಾಣಗಳ ಅನುಕೂಲತೆಯನ್ನು ಸಾರ್ವಜನಿಕ ಪ್ರಯಾಣಿಕರು ಅಥವಾ ಪ್ರವಾಸಿಗರು ಪಡೆದುಕೊಳ್ಳ ಬಹುದಾಗಿರುತ್ತದೆ. ಅಂತೆಯೇ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವು ಮಡಿಕೇರಿಯಿಂದ ಚೇಲಾವರ, ಭಾಗಮಂಡಲ, ಕುಶಾಲನಗರ, ಹಾಗೂ ಮಾಂದಲಪಟ್ಟಿಗೆ ಮತ್ತು ವಿರಾಜಪೇಟೆ ಯಿಂದ ಭಾಗಮಂಡಲಕ್ಕೆ ಹಾಗೂ ಗೋಣಿಕೊಪ್ಪದಿಂದ ನಾಗರಹೊಳೆ ಮಾರ್ಗವಾಗಿ ಮೈಸೂರಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದು ಇವುಗಳ ಅನುಕೂಲತೆಯನ್ನು ಪಡೆದುಕೊಂಡು ಸಾರ್ವಜನಿಕ ಪ್ರಯಾಣಿಕರು ಮತ್ತು ಪ್ರವಾಸಿಗರು, ತಲಕಾವೇರಿ, ಅಭಿಫಾಲ್ಸ್, ಇರ್ಪುಫಾಲ್ಸ್, ದುಬಾರೆ, ಚೇಲಾವರ, ನಾಲ್ಕುನಾಡು ಅರಮನೆ ಮುಂತಾದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹು ದಾಗಿದೆ, ಪಸ್ತುತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವು (ಏSಖಿಆಅ) ರಜಾ ದಿನಗಳಲ್ಲಿ ಮತ್ತು ವಾರಾಂತ್ಯ ತಲಕಾವೇರಿ, ಅಭಿಫಾಲ್ಸ್, ಇರ್ಪುಫಾಲ್ಸ್, ದುಬಾರೆ, ಚೇಲಾವರ, ನಾಲ್ಕುನಾಡು ಅರಮನೆ ಮುಂತಾದ ಸ್ಥಳಗಳಿಗೆ ಪ್ಯಾಕೇಜ್ ಪ್ರವಾಸ ವ್ಯವಸ್ಥೆಯನ್ನು ಮಾಡುತ್ತಿದ್ದು ಇವುಗಳ ಅನುಕೂಲತೆಯನ್ನು ಪ್ರವಾಸಿಗರು ಸದ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಸಾರಿಗೆ ಸಚಿವರು ಉತ್ತರಿಸಿದರು.

ಮಾಡಲಾಗಿದ್ದಲ್ಲಿ ಯಾವ ಯಾವ ನಿಗದಿತ ಸಮಯಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ? ಎಂಬ ಪ್ರಶ್ನೆಗೆ ಸಚಿವರು ಪ್ರಸ್ತುತ ನಿಗಮದ ವತಿಯಿಂದ ಭಾಗಮಂಡಲ, ಕುಶಾಲನಗರ, ಮಾಂದಲಪಟ್ಟಿ, ಚೇಲಾವರ ಹಾಗೂ ನಾಗರಹೊಳೆಗೆ ಕಲ್ಪಿಸಿರುವ ಸಾರಿಗೆಗಳ ವಿವರಗಳನ್ನು “ಅನುಬಂಧ-ಅ” ನಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.

ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಕೆಲವು ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ? ಸಾರಿಗೆ ವ್ಯವಸ್ಥೆ ಕಲ್ಲಿಸಲು ಸರ್ಕಾರದ ನಿಲುವೇನು? ಎಂಬ ಪ್ರಶ್ನೆಗೆ ಮೇಲಿನ ಕಂಡಿಕೆಗಳಲ್ಲಿ ವಿವರಿಸಿರುವಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ನಿಗಮದ ವತಿಯಿಂದ ಸಾರಿಗೆ ಸಂಪರ್ಕ ಒದಗಿಸಲಾಗಿದೆ ಎಂದು ಉತ್ತರಿಸಿದರು.

ಮನೆ ನಿರ್ಮಾಣಕ್ಕೆ ಅವಕಾಶ ನೀಡಿ

ಮಡಿಕೇರಿ ನಗರಸಭೆ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ತೆರಿಗೆ ಪಾವತಿಸಿ ಖಾತೆ ಹೊಂದಿರುವವರು ತಮ್ಮ ಜಾಗದಲ್ಲಿರುವ ಹಳೇಮನೆ ಕೆಡವಿ ಹೊಸದಾಗಿ ನಿರ್ಮಿಸಲು ಅಥವಾ ದುರಸ್ತಿಗೊಳಿಸಲು ಈ ನಿವೇಶನವನ್ನು ಭೂ ಪರಿವರ್ತನೆ ಮಾಡಬೇಕೆಂದು ಆದೇಶ ಹೊರಡಿಸಿ ರುವದರಿಂದ ಖಾತೆದಾರರಿಗೆ ತೀವ್ರ ತೊಂದರೆಯಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ವೀಣಾ ಅಚ್ಚಯ್ಯ ಅವರು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಸಚಿವರಾದ ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದರು.

ಕರ್ನಾಟಕ ಭೂ ಕಂದಾಯ ಕಾಯ್ದೆಯನ್ವಯ ಯಾವದೇ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕೆ ಉಪಯೋಗಿಸಲು ಕಂದಾಯ ಇಲಾಖೆಯಿಂದ ಭೂ ಪರಿವರ್ತನಾ ಆದೇಶ ಪಡೆ ಯುವದು ಕಡ್ಡಾಯ ವಾಗಿರುತ್ತದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ವಯ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿಗಳಿಗೆ ಅನುಮೋದನೆ ಯನ್ನು ಸಂಬಂಧಪಟ್ಟ ಪ್ರಾಧಿಕಾರ ಗಳಿಂದ ಪಡೆಯಬೇಕಾ ಗಿರುತ್ತದೆ.

ಕರ್ನಾಟಕ ಪೌರಕಾಯ್ದೆ, 1964ರ ಕಲಂ 187 ನ್ನು 8.12.1976 ರಲ್ಲಿ ಜಾರಿಗೆ ಬಂದಿದ್ದು, 387 ಯೋಜನಾ ಪ್ರಾಧಿಕಾರದೊಂದಿಗೆ ಸಮಾಲೋಚನೆ, ಮುನ್ಸಿಪಲ್ ಕೌನ್ಸಿಲ್, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದ ಮೇರೆಗೆ ಯೋಜನಾ ಪ್ರಾಧಿಕಾರವನ್ನು ರಚಿಸದೆ ಇರುವ ಸ್ಥಳಗಳಲ್ಲಿ, ಪಟ್ಟಣ ಯೋಜನೆಗೆ ಸಂಬಂಧಿಸಿದ ವಿಷಯಗಳಲ್ಲಿ ಅತಿ ಸಮೀಪದ ಯೋಜನಾ ಪ್ರಾಧಿಕಾರದೊಡನೆ ಸಮಾಲೋಚಿಸತಕ್ಕದ್ದು.

ವಿನ್ಯಾಸ ಅನುಮೋದನೆಗೆ ಕಂದಾಯ ಇಲಾಖೆಯ ಭೂ ಪರಿವರ್ತನಾ ಆದೇಶವನ್ನು ಪಡೆಯಬೇಕಿದ್ದು, ಕಟ್ಟಡ ನಕ್ಷೆ ಅನುಮೋದನೆಗೆ ಪೂರ್ವದಲ್ಲಿ ವಿನ್ಯಾಸ ಅನುಮೋದನೆ ಪಡೆಯ ಬೇಕಿರುತ್ತದೆ. ರಾಜ್ಯದ ಯಾವದೇ ನಗರ, ಪಟ್ಟಣ ಪ್ರದೇಶಗಳಲ್ಲಿ ಕಟ್ಟಡ ಪರವಾನಿಗೆ ನೀಡುವ ಪೂರ್ವದಲ್ಲಿ ದಿನಾಂಕ 08-12-1976ರ ತಿದ್ದುಪಡಿಯ ನಂತರ ಭೂ ಪರಿವರ್ತನಾ ಆದೇಶ ಹಾಗೂ ವಿನ್ಯಾಸ ಅನುಮೋದನೆಯನ್ನು ಪಡೆಯುವದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರಿಂದ ದಿನಾಂಕ; 4.5.2017ರ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈ ಸುತ್ತೋಲೆಯನ್ನು ಪರಿಷ್ಕರಿಸುವ ಕುರಿತು ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದ್ದು, ಅಕ್ರಮ-ಸಕ್ರಮ ಯೋಜನೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವದರಿಂದ ಈ ಹಂತದಲ್ಲಿ ಕ್ರಮ ಜರುಗಿಸಲು ಅವಕಾಶ ವಿಲ್ಲವೆಂದು ಕಾನೂನು ಇಲಾಖೆ ಯು ಅಭಿಪ್ರಾಯಿಸಿದೆ. ಆದರೆ ಸುತ್ತೋಲೆಯಲ್ಲಿ ನಿರ್ದೇಶನಗಳನ್ನು ಪಾಲಿಸುವಲ್ಲಿ ಸಮಸ್ಯೆಗಳನ್ನು ವಿವರಿಸಿ ಕೆಲವು ಪ್ರಾಧಿಕಾರಗಳು ಸ್ಪಷ್ಟೀಕರಣ, ಮಾರ್ಗದರ್ಶನವನ್ನು ನೀಡುವಂತೆ ಕೋರುತ್ತಿದ್ದು, ಹಾಗೂ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಮನವಿಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಅಡ್ವೋಕೇಟ್ ಜನರಲ್ ಇವರ ಅಭಿಪ್ರಾಯ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬಂದಿದ್ದಲ್ಲಿ ಈ ಆದೇಶವನ್ನು ಹಿಂಪಡೆದು ಹೊಸ ಆದೇಶವನ್ನು ಹೊರಡಿಸಲಾಗುವದೇ ಎಂಬ ಪ್ರಶ್ನೆಗೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದ ನಂತರ ನಿಯಮಾನುಸಾರ ಕ್ರಮವಹಿಸ ಲಾಗುವದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.