ಮಡಿಕೇರಿ, ಜು. 10: ಕೊಡಗು ಜಿಲ್ಲೆಯಲ್ಲಿ ವಿವಾದದೊಂದಿಗೆ, ಆತಂಕಕ್ಕೂ ಕಾರಣವಾಗಿರುವ ಉದ್ದೇಶಿತ ಮೈಸೂರು - ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಸರಕಾರವು ಸರ್ವೆ ಕಾರ್ಯ ನಡೆಸಲು ಅನುಮತಿಯನ್ನು ನೀಡುವಂತೆ ಕೋರಿದೆ. ಆದರೆ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕರ್ನಾಟಕ ಸರಕಾರವು ತಿಳಿಸಿದೆಯೇ ಹೊರತು ರಾಜ್ಯ ಸರಕಾರದಿಂದ ಸರ್ವೆ ನಡೆಸಲು ಅನುಮತಿಯನ್ನು ನೀಡಲಾಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.ರೈಲು ಮಾರ್ಗ ಹಾಗೂ ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ನಡೆದಿರುವ ಸರ್ವೆ ಕಾರ್ಯವನ್ನು ಉಲ್ಲೇಖಿಸಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಪಿ. ಸುನಿಲ್ ಸುಬ್ರಮಣಿ ಅವರು ನಿನ್ನೆ ಸಭಾಪತಿಗಳಿಗೆ ಪತ್ರ ಬರೆದಿದ್ದು, ಶೂನ್ಯ ವೇಳೆಯಲ್ಲಿ ಈ ವಿಚಾರದ ಪ್ರಸ್ತಾಪಕ್ಕೆ ಅವಕಾಶ ಕೇಳಿದ್ದರು. ಇದರಂತೆ ಸೋಮವಾರ ಪರಿಷತ್‍ನಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತಾದರೂ ಇದಕ್ಕೆ ಸಂಬಂಧಪಟ್ಟ ಮೂಲ ಸೌಕರ್ಯ ಅಭಿವೃದ್ಧಿ ಸಚಿವರು ಉತ್ತರ ನೀಡಿರಲಿಲ್ಲ. ಈ ಬಗ್ಗೆ ಸರಕಾರದಿಂದ ಉತ್ತರ ಒದಗಿಸುವದಾಗಿ ಸಭಾಪತಿ ಭರವಸೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು - ತಲಚೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಎರಡು ಸಭೆಗಳು ನಡೆದಿದ್ದು, ಈ ಸಭೆಯಲ್ಲಿ ಉದ್ದೇಶಿತ ರೈಲು ಮಾರ್ಗವು ಆನೆಗಳ ಕಾರಿಡಾರ್ ಮೂಲಕ ಹಾದು ಹೋಗುವದರಿಂದ ಆ ಭಾಗದಲ್ಲಿ ಮನುಷ್ಯರ ಮತ್ತು ಆನೆಗಳ ನಡುವಿನ ಸಂಘರ್ಷವು ಹೆಚ್ಚಾಗಲಿದೆ ಎಂದು ಕರ್ನಾಟಕ ಸರಕಾರವು ತಿಳಿಸಿತ್ತು. ಕೇರಳ ಸರಕಾರವು ಈ ಮಾರ್ಗದ ಕುರಿತಾಗಿ ಸರ್ವೆ ಮಾಡಲು ಅನುಮತಿಯನ್ನು ನೀಡುವಂತೆ ಕೋರಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮಾತ್ರ ಕರ್ನಾಟಕ ಸರಕಾರವು ತಿಳಿಸಿದೆ ಇದರ ಹೊರತಾಗಿ ರಾಜ್ಯ ಸರಕಾರ ಸರ್ವೆ ಕಾರ್ಯ ನಡೆಸಲು ಯಾವದೇ ಅನುಮತಿಯನ್ನು ನೀಡಿಲ್ಲ ಎಂದು ಕುಮಾರಸ್ವಾಮಿ ಅವರು ಉತ್ತರಿಸಿದ್ದಾರೆ.

ಮಳೆಹಾನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯದ ಕಂದಾಯ ಸಚಿವರು ಕೊಡಗಿಗೆ ಭೇಟಿ ನೀಡಿದ್ದ ವೇಳೆಯಲ್ಲಿ

(ಮೊದಲ ಪುಟದಿಂದ) ಮಡಿಕೇರಿಯಲ್ಲಿ ನಡೆಸಿದ ಸಭೆಯಲ್ಲಿಯೂ ಇದನ್ನು ತಿಳಿಸಿದ್ದರು. ಅಲ್ಲಿರುವ ಸ್ಥಳೀಯ ನಾಗರಿಕರಿಗೆ ಈ ಯೋಜನೆಯ ಸರ್ವೆ ಕಾರ್ಯ ನಡೆಸಲು ಸರಕಾರದಿಂದ ಯಾವದೇ ಅನುಮತಿಯನ್ನು ನೀಡಿಲ್ಲ ಎಂದು ಕಂದಾಯ ಸಚಿವರು ಹೇಳಿದ್ದರು ಎಂದು ಮುಖ್ಯಮಂತ್ರಿಗಳು ಇಂದು ನೀಡಿರುವ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

ಉದ್ದೇಶಿತ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ ಮತ್ತು ರಾಜ್ಯ ಸರಕಾರದ ಮೇಲಾಗುವ ಆರ್ಥಿಕ ಪರಿಣಾಮ ಇತ್ಯಾದಿ ಪ್ರಮುಖವಾದ ಅಂಶಗಳನ್ನು ಪರಿಗಣಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮೂಲಕ ಮೈಸೂರು - ತಲಚೇರಿ ರೈಲ್ವೆ ಮಾರ್ಗಕ್ಕೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ಕಂಡು ಬಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ, ಸರ್ವೆ ಕಾರ್ಯ ಕೈಗೆತ್ತಿಕೊಂಡಿರುವದು ಬೆಳಕಿಗೆ ಬಂದಿದೆ.

ಈ ಯೋಜನೆಯ ಸರ್ವೆ ಕಾರ್ಯ ದಕ್ಷಿಣ ಕೊಡಗಿನ ಕುಟ್ಟ, ಕೆ. ಬಾಡಗ ಮತ್ತು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗೆ ಖಾಸಗಿ ಜಾಗದಲ್ಲಿ ಮಾಲೀಕರಿಗೆ ಯಾವದೇ ಮಾಹಿತಿ ನೀಡದೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಈ ಸರ್ವೆ ಕಾರ್ಯಕ್ಕೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ಪರಿಕರಗಳೊಂದಿಗೆ ಸರ್ವೆ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ. ಈ ಸಿಬ್ಬಂದಿ ಹೊಂದಿರುವ ಸರ್ವೆ ಮಾಹಿತಿಯ ನಕಾಶೆಯಂತೆ ಈಗಾಗಲೇ ಯೋಜನೆಯ ಮಾರ್ಗವನ್ನು ಗುರುತಿಸಲಾಗಿದ್ದು, ಜಿಲ್ಲೆಯ ತಿತಿಮತಿ ಮೂಲಕ ಜಿಲ್ಲೆಗೆ ಪ್ರವೇಶಿಸುವ ಈ ಮಾರ್ಗವು ಹಲವೆಡೆ ಸುರಂಗಗಳ ಮೂಲಕ ಹಾದು ಹೋಗುವದನ್ನೂ ಗುರುತಿಸಲಾಗಿದ್ದು, ಜಿಲ್ಲೆಯ ಕುಟ್ಟದ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವದನ್ನು ಗುರುತಿಸಲಾಗಿದೆ.

ದಕ್ಷಿಣ ಕೊಡಗಿನ ಮೂಲಕ ರೈಲ್ವೆ ಯೋಜನೆಗೆ ಅವಕಾಶ ನೀಡಿದರೆ, ಜಿಲ್ಲೆಯ ಅಸ್ತಿತ್ವವಾದ ಕಾಫಿ ತೋಟಗಳಿಗೆ, ಜಿಲ್ಲೆಯ ಜನಜೀವನಕ್ಕೆ ಹಾಗೂ ಮೇಲಾಗಿ ಕಾವೇರಿ ನದಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವದೆಂದು ಪರಿಸರವಾದಿಗಳ ಅಭಿಪ್ರಾಯವಾಗಿದ್ದು, ಈ ಸರ್ವೆ ಕಾರ್ಯದ ಕುರಿತಾಗಿ ಸರ್ಕಾರದ ನಿಲುವೇನು ಈ ಸರ್ವೆ ಕಾರ್ಯಕ್ಕೆ ರಾಜ್ಯದಿಂದ ಅನುಮತಿ ನೀಡಲಾಗಿದೆಯೇ ಎಂಬದನ್ನು ಸುನಿಲ್ ಸುಬ್ರಮಣಿ ಪ್ರಶ್ನಿಸಿದ್ದರು.