ನಾಪೋಕ್ಲು, ಜು. 6: ಸಕಲೇಶಪುರ ಸಮೀಪದ ಅಳಂದೂರು ಎಂಬಲ್ಲಿ ಕಾರು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕೊಡಗಿನ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಚೆಯ್ಯಂಡಾಣೆ ಬಳಿಯ ನರಿಯಂದಡ ಗ್ರಾಮದ ತೋಟಂಬೈಲು ಅನಂತ್ ಕುಮಾರ್ ಅವರ ಸಹೋದರಿ ಚಿಕ್ಕಮಗಳೂರಿನ ಕೊಪ್ಪದಲ್ಲಿ ನೆಲೆಸಿದ್ದು, ಇತ್ತೀಚೆಗೆ ಅಪಘಾತವೊಂದರಲ್ಲಿ ಅವಘಡಕ್ಕೀಡಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಕುಮಾರ್ ತಮ್ಮ ಕಾರಿನಲ್ಲಿ ಪತ್ನಿ, ತಂಗಿ ಹಾಗೂ ಅತ್ತೆÉಯೊಂದಿಗೆ ಇಂದು ಬೆಳಿಗ್ಗೆ ಮನೆಯಿಂದ 4 ಗಂಟೆಗೆ ಹೊರಟಿದ್ದಾರೆ. ಮಂಜು ಮುಸುಕಿದ ವಾತಾವರಣವಿದ್ದರಿಂದ ಅವಘಡ ಸಂಭವಿಸಿದೆ. ಅವಘಡದಲ್ಲಿ ಕುಮಾರ್ ಅವರ ಎದೆ ಹಾಗೂ ಮುಖಕ್ಕೆ ಪೆಟ್ಟಾಗಿದ್ದರೆ, ಪತ್ನಿ ಖುಷಿ ಅವರ ಕಾಲಿಗೆ ಪೆಟ್ಟಾಗಿದೆ. ಅತ್ತೆ ಚೆರಿಯಮನೆ ರೋಹಿಣಿ ಅವರ ಎರಡೂ ಕಾಲುಗಳಿಗೂ ಗಂಭೀರ ಪೆಟ್ಟಾಗಿದ್ದು, ಸಹೋದರಿ ಜ್ಯೋತಿ ಅವರ ಭುಜ ಭಾಗಕ್ಕೆ ಪೆಟ್ಟಾಗಿದೆ. ಅಳಂದೂರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿದ ಬಳಿಕ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಂಗಳೂರು ಹಾಗೂ ಬೆÉಂಗಳೂರು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.