ಮಡಿಕೇರಿ, ಜು. 1: ಮಡಿಕೇರಿಯ ಹೊರ ವಲಯದಲ್ಲಿರುವ ವಿಶಾಲ ಬೆಟ್ಟ ಶ್ರೇಣಿಯ ನಡುವೆ ಕರ್ಣಂಗೇರಿ ಗ್ರಾಮದ ಪ್ರಕೃತಿ ರಮಣೀಯ ಸೊಬಗಿನ ಪ್ರದೇಶದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸರಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯು ತನ್ನ ಎರಡು ಶೈಕ್ಷಣಿಕ ವರ್ಷಗಳನ್ನು ಪೂರೈಸಿ, ಪ್ರಸಕ್ತ ಆಗಸ್ಟ್‍ನಿಂದ ತೃತೀಯ ವರ್ಷಕ್ಕೆ ಪದಾರ್ಪಣೆಗೊಳ್ಳತೊಡಗಿದೆ. ಕರ್ಣಂಗೇರಿ ಗ್ರಾಮದ ಈ ಬೆಟ್ಟ ಶ್ರೇಣಿಯ ಒಟ್ಟು 48 ಎಕರೆ ಪ್ರದೇಶದಲ್ಲಿ ಈಗಾಗಲೇ ಅಂದಾಜು ರೂ. 170 ಕೋಟಿ ವೆಚ್ಚದ ಕಾಮಗಾರಿ ಸಾಗಿದೆ.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹೆಸರಿನೊಂದಿಗೆ ಕರ್ನಾಟಕ ಸರಕಾರದಿಂದ 2015 ರಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವದ ರೊಂದಿಗೆ ದೇಶದ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಕರ್ನಾಟಕದ ಒಟ್ಟು 150 ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿ ದ್ದಾರೆ. ದ್ವಿತೀಯ ವರ್ಷ ದಲ್ಲಿಯೂ ಅರ್ಹತೆ ಮೇರೆಗೆ 150 ವಿದ್ಯಾರ್ಥಿ ಗಳ ಸೇರ್ಪಡೆಯೊಂದಿಗೆ ಪ್ರಸಕ್ತ ಆಗಸ್ಟ್‍ನಲ್ಲಿ ಮುಂದಿನ ಸಾಲಿಗೆ ಮತ್ತೆ 150 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ.

ವಿಶಾಲ ಕೊಠಡಿಗಳೊಂದಿಗೆ ಆಧುನಿಕ ವೈದ್ಯಕೀಯ ಶಿಕ್ಷಣ ಪದ್ಧತಿಯ ಕಲಿಕೆಗೆ ಅವಶ್ಯಕವಿರುವ ಎಲ್ಲ ತಂತ್ರಜ್ಞಾನ ಸಲಕರಣೆಗಳ ಸಹಿತ ಇಲ್ಲಿ ಒಂದು ನೂರಕ್ಕೂ ಅಧಿಕ ಮಂದಿ ಭೋದಕರು ಹಾಗೂ ಭೋದಕೇತರ ಸಿಬ್ಬಂದಿ ಕರ್ತವ್ಯನಿರತರಾಗಿದ್ದಾರೆ. ಶಿಕ್ಷಣಾರ್ಥಿಗಳಿಗೆ ಇಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಪುರುಷರು, ಮಹಿಳಾ ವಸತಿ ಗೃಹಗಳಿದ್ದು, ವಿಶೇಷ ಕಾರ್ಯಾಗಾರ, ಕಮ್ಮಟಗಳನ್ನು ನಡೆಸುವ ಸಭಾಂಗಣಗಳು ಸಾಮಥ್ರ್ಯಕ್ಕೆ ತಕ್ಕಂತೆ ಆಧುನಿಕ ಅನುಕೂಲದೊಂದಿಗೆ ರೂಪುಗೊಂಡಿದೆ.

ಕಡಿಮೆ ಶುಲ್ಕ: ಇಂದಿನ ಪೈಪೋಟಿ ಯುಗದಲ್ಲಿ ಎಲ್ಲಿಯೋ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಭಾರೀ ಮೊತ್ತದ ಶುಲ್ಕ ನೀಡಿ ಕಲಿಕೆಗೆ ತೆರಳುವ ಬದಲು ಈ ನೂತನ ಸರಕಾರಿ

(ಮೊದಲ ಪುಟದಿಂದ) ಸಂಸ್ಥೆಯಲ್ಲಿ ಕನಿಷ್ಟ ಶುಲ್ಕ ಇತ್ಯಾದಿ ಪಾವತಿಸಿ, ಉತ್ತಮ ವ್ಯವಸ್ಥೆಯಡಿ ಕೊಡಗಿನ ಸುಂದರ ಪರಿಸರದಲ್ಲಿ ಕಲಿಕೆಗೆ ಅವಕಾಶ ಲಭಿಸಲಿದೆ. ವಾರ್ಷಿಕ ರೂ. 30 ಸಾವಿರದಿಂದ ರೂ. 70 ಸಾವಿರದೊಳಗೆ ಎಲ್ಲ ವೆಚ್ಚ ಭರಿಸಿ ಕಲಿಯುವ ಅವಕಾಶ ಇಲ್ಲಿದೆ. ಭವಿಷ್ಯದಲ್ಲಿ ಇದೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಥೆ ಮೂಲಕ ಅಂದಾಜು ರೂ. 5 ರಿಂದ 10 ಸಾವಿರ ಶಿಷ್ಯವೇತನ ಮರಳಿ ಕೈಸೇರಲಿದೆ.

ಪ್ಯಾರಾ ಮೆಡಿಕಲ್ ಶಿಕ್ಷಣ: ಪ್ರಸಕ್ತ ಸೆಪ್ಟೆಂಬರ್‍ನಿಂದ ಮಡಿಕೇರಿಯ ಈ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಅರ್ಹತೆ ಮೇರೆಗೆ ಕಲಿಯುತ್ತಿರುವ ಎಂ.ಬಿ.ಬಿ.ಎಸ್. (ಉನ್ನತ) ಶಿಕ್ಷಣ ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರಕ್ಕೆ ಸಹಕಾರಿಯಾಗುವ ‘ಪ್ಯಾರಾ ಮೆಡಿಕಲ್ ಕೋರ್ಸ್’ ಹಾಗೂ ಪಿ.ಜಿ. ಶಿಕ್ಷಣ ಜಾರಿಗೊಳ್ಳಲಿದ್ದು, ಕನಿಷ್ಟ 10ನೇ ತರಗತಿ ಹಾಗೂ ಪಿ.ಯು.ಸಿ. ಪೂರೈಸಿರುವ ಅಭ್ಯರ್ಥಿಗಳಿಗೆ ಸೇರ್ಪಡೆಗೊಳ್ಳಲು ಅವಕಾಶವಿದ್ದು, ಕೊಡಗಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣ ಕಲಿಕೆಗೆ ಆಸಕ್ತಿ ತೋರುವಂತೆ ಈ ಸಂಸ್ಥೆಯ ಆಡಳಿತ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

ಕಾಮಗಾರಿ ವಿಳಂಬ: ಕೊಡಗು ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಕಟ್ಟಡ ಕಾಮಗಾರಿಯನ್ನು ಬೆಂಗಳೂರಿನ ನಾಗಾರ್ಜುನ ಕಟ್ಟಡ ನಿರ್ಮಾಣ ಉದ್ದಿಮೆ ಗುತ್ತಿಗೆಪಡೆದುಕೊಂಡಿದ್ದು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದು ಗೊತ್ತಾಗಿದೆ. ಪರಿಣಾಮ ವಿದ್ಯಾರ್ಥಿಗಳ ಕಲಿಕೆ ಹಾಗೂ ಇತರ ಚಟುವಟಿಕೆಗಳಿಗೆ ಅಪೂರ್ಣ ಕೆಲಸದೊಂದಿಗೆ ವಿದ್ಯುತ್ ಸೌಲಭ್ಯ ಇತ್ಯಾದಿ ಸಮಸ್ಯೆ ಎದುರಾಗಿದೆ ಎಂದು ಅಲ್ಲಿನ ಆಡಳಿತ ಮುಖ್ಯಸ್ಥರಾಗಿರುವ ಡಾ. ಮೇರಿ ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪ್ರಸಕ್ತ ಮೇ ಅಂತ್ಯದೊಳಗೆ ಅಂತಿಮ ಕಾಮಗಾರಿ ಪೂರೈಸಲು ಗಡುವು ನೀಡಿದ್ದರೂ ಕೂಡ ಸಾಧ್ಯವಾಗಿಲ್ಲವೆಂದು ಸುಳಿವು ನೀಡಿದರು. ಈ ಸಂಬಂಧ ಸರಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತರ ಗಮನ ಸೆಳೆಯಲಾಗಿದ್ದು, ನೂತನ ಸರಕಾರದ ಸಂಬಂಧಪಟ್ಟ ಸಚಿವರು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಬೇಕಿದೆ. ಆ ಮುಖಾಂತರ ಭವಿಷ್ಯದ ಶಿಕ್ಷಣಾರ್ಥಿ ಗಳಿಗೆ ತೊಡಕು ಎದುರಾಗದಂತೆ ಗಮನ ಹರಿಸಬೇಕಿದೆ.