ಮಡಿಕೇರಿ, ಮೇ 30: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಮಾಂದಲ್‍ಪಟ್ಟಿಗೆ ತೆರಳುವ ಪ್ರವಾಸಿ ವಾಹನಗಳು ನಿಯಮಬಾಹಿರವಾಗಿ ರಹದಾರಿ, ಷರತ್ತನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದು, ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಹಿತದೃಷ್ಟಿ ಹಾಗೂ ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಜೀವನ ನಿರ್ವಹಣೆ ಗಮನಿಸಿ ಪ್ರವಾಸಿ ವಾಹನಗಳಿಗೆ ಸೂಕ್ತ ದರ ನಿಗದಿಪಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಆ ನಿಟ್ಟಿನಲ್ಲಿ ಗರಿಷ್ಠ ಆಸನ ಸಾಮಥ್ರ್ಯ 8 ಮೀರದ ರಹದಾರಿ ಹೊಂದಿರುವ ಜೀಪ್(ಹಳದಿ ಫಲಕ) ವಾಹನಗಳಿಗೆ ಮತ್ತು ವಾಪಸ್ಸು ಪ್ರಯಾಣ ದರ ಸಹ ಒಳಗೊಂಡಂತೆ ದರ ನಿಗದಿಪಡಿಸಲಾಗಿದೆ.

ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶದ್ವಾರದ ವರೆಗೆ (ಮಾರ್ಗ ರಾಜಾಸೀಟು, ಕೆ.ನಿಡುಗಣೆ) 800 ರೂ,. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶ ದ್ವಾರದವರೆಗೆ (ಮಾರ್ಗ ರಾಜಸೀಟು, ಎಫ್‍ಎಂಕೆಎಂಸಿ ಕಾಲೇಜು, ಕೋಳಿಗೂಡು, ಕಾಲೂರು) 800 ರೂ,. ಪ್ರವೇಶ ದ್ವಾರದಿಂದ ಮಾಂದಲ್‍ಪಟ್ಟಿಯ ಪ್ರೇಕ್ಷಣಿಯ ಸ್ಥಳದ ವರೆಗೆ (ವ್ಯೂ ಪಾಯಿಂಟ್) 300 ರೂ, ಮಡಿಕೇರಿ ಬಸ್ ನಿಲ್ದಾಣದಿಂದ ಅಬ್ಬಿಜಲಪಾತದ ವರೆಗೆ (ಮಾರ್ಗ ರಾಜಾಸೀಟು, ಕೆ.ನಿಡುಗಣೆ) 400 ರೂ, ಮಡಿಕೇರಿ ಬಸ್ ನಿಲ್ದಾಣದಿಂದ ಪ್ರವೇಶ ದ್ವಾರದವರೆಗೆ (ಮಾರ್ಗ ರಾಜಾಸೀಟು, ಕೆ.ನಿಡುಗಣೆ, ಅಬ್ಬಿ ಜಲಪಾತ) 1000 ರೂ. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರೇಕ್ಷಣಿಯ ಸ್ಥಳದ ವರೆಗೆ (ವ್ಯೂ ಪಾಯಿಂಟ್) 1100 ರೂ. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿ ಪ್ರೇಕ್ಷಣಿಯ ಸ್ಥಳದ ವರೆಗೆ (ಮಾರ್ಗ ರಾಜಾಸೀಟು-ಕೆ.ನಿಡುಗಣೆ, ಅಬ್ಬಿ ಜಲಪಾತ) 1300 ರೂ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಮಾಂದಲ್‍ಪಟ್ಟಿ ಪ್ರವಾಸಿ ಕೇಂದ್ರಕ್ಕೆ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ನಡೆದ ಸಭೆಯಲ್ಲಿ ಮಾಂದಲ್‍ಪಟ್ಟಿಯಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರವಾಸಿಗರ ವೀಕ್ಷಣೆಗೆ ವಾಹನ ವ್ಯವಸ್ಥೆ, ಪ್ರಯಾಣಿಕರ ಭದ್ರತೆ, ಶೌಚಾಲಯ, ವಾಹನ ನಿಲುಗಡೆ, ಕ್ಯಾಂಟೀನ್ ಸೌಲಭ್ಯ, ಮತ್ತಿತರವನ್ನು ಮಾಂದಲ್‍ಪಟ್ಟಿಯಲ್ಲಿ ಶಾಶ್ವತವಾಗಿ ಕಲ್ಪಿಸಬೇಕಿದೆ. ಜೊತೆಗೆ ಪ್ರವಾಸಿ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಲು ಗಮನಹರಿಸಬೇಕಿದೆ ಎಂದು ಅವರು ತಿಳಿಸಿದರು.

ನಗರದಿಂದ ಮಾಂದಲ್‍ಪಟ್ಟಿ ವರೆಗೆ ಮಿನಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಪ್ರವೇಶ ದ್ವಾರದ ಬಳಿ ಸಿಸಿ ಕ್ಯಾಮರಾ ಹಾಗೂ ಸೂಚನಾ ಫಲಕ ಅಳವಡಿಸುವದು ಮತ್ತಿತರ ಸಂಬಂಧ ಗಮನಹರಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಬಾಲಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ಎಂ.ಎಲ್. ಮಂಜುನಾಥ್, ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಎಲ್ ಶಿರಾಲಿ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ಪಿಡಿಓಗಳಾದ ಶಶಿಕಿರಣ, ಎ.ಪಿ. ದೇವಯ್ಯ, ಪ್ರವಾಸಿ ಅಧಿಕಾರಿ ರಾಘವೇಂದ್ರ, ಶಿವಣ್ಣ, ರೀಟಾ ಇತರರು ಇದ್ದರು.