ಸಿದ್ದಾಪುರ, ಮೇ 22: ಗಾಯಗೊಂಡಿದ್ದ ಕಾಡಾನೆಯೊಂದನ್ನು ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯು ದುಬಾರೆ ಸಾಕಾನೆ ಶಿಬಿರಕ್ಕೆ ಹಸ್ತಾಂತರಿಸಲಾಗಿದೆ.

ಸಿದ್ದಾಪುರ ಸಮೀಪದ ಆನಂದಪುರ ಕಾಫಿ ತೋಟದೊಳಗಿದ್ದ ಅಂದಾಜು 4 ವರ್ಷ ಪ್ರಾಯದ ಕಾಡಾನೆಯ ಮರಿಯೊಂದು ಗುಂಡೇಟು ತಗಲಿ ಹೊಟ್ಟೆ ಭಾಗಕ್ಕೆ ಗಾಯವಾಗಿತ್ತು. ಈ ವಿಚಾರ ತಿಳಿದ ವೀರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಗಾಯಗೊಂಡು ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದ ಹೆಣ್ಣು ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾ ಚರಣೆ ನಡೆಸಿ ಸೆರೆ ಹಿಡಿದರು. ಗಾಯಕ್ಕೆ ಚಿಕಿತ್ಸೆ ನೀಡಿ ನಂತರ ದುಬಾರೆಯ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು.

ಈ ಸಂದರ್ಭ ವೀರಾಜಪೇಟೆ ತಾಲೂಕು ಡಿಸಿಎಫ್ ಮರಿಯ ಕ್ರಿಸ್ತುರಾಜ್, ಎಸಿಎಫ್ ರೋಷಿಣಿ, ವಲಯ ಅರಣ್ಯಾಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ, ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಆರ್‍ಆರ್‍ಟಿ ತಂಡದ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.