ಕೂಡಿಗೆ, ಮೇ 20: ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರುಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಹಾಗೂ ಇಲ್ಲಿನ ವಾತಾವರಣ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಸರಕಾರ ರಿಯಾಯಿತಿ ದರದಲ್ಲಿ ಜೋಳದ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳನ್ನು ದಾಸ್ತಾನು ಇಡಲಾಗಿದೆ. ಇದರ ಸದುಪಯೋಗ ವನ್ನು ರೈತರು ಸದ್ಬಳಸಿಕೊಳ್ಳಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಕೂಡಿಗೆಯ ರಾಮಲಿಂಗೇಶ್ವರ ಸಹಕಾರ ಸಂಘದ ದಾಸ್ತಾನು ಗೋದಾಮಿಗೆ ಭೇಟಿ ನೀಡಿದ ಸಂದರ್ಭ ತಿಳಿಸಿದರು.

ಈ ಸಾಲಿನಲ್ಲಿ ಜೋಳದ ಬಿತ್ತನೆ ಬೀಜಗಳಾದ ಗಂಗಾ ಕಾವೇರಿ, ದ್ರೋಣ ಸೇರಿದಂತೆ ವಿವಿಧ ಹೈಬ್ರಿಡ್ ತಳಿಗಳನ್ನು ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ. ರೈತರು ತಮ್ಮ ಜಮೀನಿನ ದಾಖಲಾತಿ ಪ್ರತಿಯನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕು.

ರೈತರು ಜಮೀನುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಜಿಲ್ಲೆಯ ವ್ಯಾಪ್ತಿಯ ರೈತರಿಗೆ ಅನುಕೂಲ ವಾಗುವಂತೆ ಕೂಡಿಗೆಯಲ್ಲಿ ಮಣ್ಣು ಆರೋಗ್ಯ ಪರೀಕ್ಷಾ ಕೇಂದ್ರವಿದ್ದು, ಇದೀಗ ಈ ಕೇಂದ್ರವು ಮೇಲ್ದರ್ಜೆಯ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿರುವದರಿಂದ ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷೆ ಫಲಿತಾಂಶವನ್ನು ನೀಡಲಾಗುವದು. ಅದರನ್ವಯ ರೈತರು ತಮ್ಮ ಜಮೀನಿನ ಮಣ್ಣನ್ನು ಈ ಕೇಂದ್ರಕ್ಕೆ ನೀಡಿ ಪರೀಕ್ಷಿಸಿ ನಂತರ ಮಣ್ಣಿಗೆ ಅನುಗುಣವಾಗಿ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಬೆಳೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆಯಬೇಕು. ಇಲಾಖೆಯ ವತಿಯಿಂದ ರೈತರಿಗೆ ಎಲ್ಲಾ ಸೌಲಭ್ಯವನ್ನು ಒದಗಿಸುತ್ತಿದ್ದು, ರೈತರು ಇದನ್ನು ಉಪಯೋಗಿಸಿ ಕೊಳ್ಳಬೇಕೆಂದರು.