ಸೋಮವಾರಪೇಟೆ, ಮಾ. 25: ಯುವ ಜನಾಂಗದ ಸದ್ಬಳಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.ಸಮೀಪದ ಯಡೂರು ಗ್ರಾಮದ ಉದಯ ಯುವಕ ಸಂಘದ ವತಿಯಿಂದ ರಾಮನವಮಿ ಪ್ರಯುಕ್ತ ಯಡೂರು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕ್ರೀಡೆಗಳಿಂದ ಸಾಮಾಜಿಕ ಸಾಮರಸ್ಯದ ಜತೆಗೆ ಸ್ಪರ್ಧಾ ಮನೋಭಾವ ಮೂಡುತ್ತದೆ ಎಂದರು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ತಾ.ಪಂ.ಸದಸ್ಯೆ ಹೆಚ್.ಎನ್. ತಂಗಮ್ಮ ಮಾತನಾಡಿ, ಯಾವದೇ ಕ್ರೀಡೆಯಾದರೂ ಪ್ರತಿಸ್ಪರ್ಧಿಗಳಿರಬೇಕು. ಕ್ರೀಡಾಪಟು ಗಳಿಗೆ ಸ್ಪರ್ಧಾ ಮನೋಭಾವ ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಡೂರು ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಪಿ. ಭಾನುಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಸದಸ್ಯೆ ವನಜಾಕ್ಷಿ ತಿಮ್ಮಯ್ಯ, ವಿಮಲಾ ಲೋಕೇಶ್, ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ, ಚೌಡ್ಲು ವಿಎಸ್ಎಸ್ಎನ್ ನಿರ್ದೇಶಕ ವೈ.ಎಂ. ನಾಗರಾಜು, ಡಿ.ಸಿ. ರಾಜು, ಸೋಮೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎಸ್. ರಘು, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಶೋಭರಾಜು ಅವರುಗಳು ಉಪಸ್ಥಿತರಿದ್ದರು.