ಮಡಿಕೇರಿ, ಮಾ. 25: ಕ್ಷಯ ರೋಗದ ಲಕ್ಷಣಗಳ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾಹಿತಿ ಸಿಗಬೇಕು ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ಷಯ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಬೇಕು. ಯಾವದೇ ಕಾರಣಕ್ಕೂ ನಿರ್ಲಕ್ಷಿಸÀ ಬಾರದು, ಸರ್ಕಾರ ಕ್ಷಯ ರೋಗಿಗಳಿಗೆ 500 ರೂ. ಸಹಾಯ ಧನ ನೀಡುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಮಾತನಾಡಿ ರಾಷ್ಟ್ರದಲ್ಲಿ 6 ಸಾವಿರ ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 600 ಮಂದಿ ಸಾಯುತ್ತಿದ್ದಾರೆ. ಈ ಕಾಯಿಲೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದೆ. ಕ್ಷಯರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಸಲಹೆ ಮಾಡಿದರು.
ಕ್ಷಯ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಫದಲ್ಲಿ ಕ್ರಿಮಿನಾಶಕಗಳು ಕಂಡುಬರುತ್ತದೆ. ಕ್ಷ ಕಿರಣ ಪರೀಕ್ಷೆಯ ಮೂಲಕ ರೋಗವನ್ನು ಕಂಡು ಹಿಡಿಯಬಹುದು. ಪರೀಕ್ಷೆಗೆ ತಡ ಮಾಡಿದರೆ ರೋಗವು ಇನ್ನೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ಷಯ ರೋಗವು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಗುಣಮುಖರಾಗಬಹುದು ಎಂದರು.
2017ರಲ್ಲಿ 412 ರೋಗಿಗಳನ್ನು ಪತ್ತೆಮಾಡಲಾಗಿದೆ ಎಚ್.ಐ.ವಿ ಸೋಂಕಿತರು ಜಿಲ್ಲೆಯಲ್ಲಿ 32 ಮಂದಿ ಇದ್ದಾರೆ. ಕ್ಷಯರೋಗಿಗಳು ಸಂಪೂರ್ಣ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಗದೀಶ್ ಮಾತನಾಡಿ ಕ್ಷಯ ರೋಗ ನಿಯಂತ್ರಣಕ್ಕೆ ಉತ್ತಮ ಚಿಕಿತ್ಸೆ ಪಡೆಯುವದರಿಂದ ಗುಣಮುಖರಾಗಬಹುದು. ಕ್ಷಯರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ ಮಾತನಾಡಿ, ಕ್ಷಯರೋಗ ದಿನದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ರೋಗವನ್ನು ನಿರ್ಮೂಲನೆ ಮಾಡಲು ಪಣತೊಡಬೇಕು. ರೋಗಿಗಳನ್ನು ತಾರತಮ್ಯ ಮಾಡಬೇಡಿ, ಕ್ಷಯರೋಗವನ್ನು ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕಾರ್ಯಪ್ಪ, ಸಮುದಾಯ ಆರೋಗ್ಯ ವಿಭಾಗದದ ಮುಖ್ಯಸ್ಥ ರಾಮಚಂದ್ರ ಕಾಮತ್ ಇತರರು ಇದ್ದರು.
ಕ್ಷಯರೋಗ ದಿನಾಚರಣೆಯ ಪ್ರಯುಕ್ತ ನಗರದ ಬಾಲಮಂದಿರದಿಂದ ಜಾಥಾ ಏರ್ಪಡಿಸಲಾಗಿತ್ತು.
ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಬಾರ ಅಧಿಕಾರಿ ಡಾ. ಆನಂದ, ಕ್ಷಯರೋಗ ನಿಯಂತ್ರಣ ವಿಭಾಗದ ಮಹದೇವಪ್ಪ ಜಿಲ್ಲಾ ಆರೋಗ್ಯ ಶಿಕ್ಷಣ ಇಲಾಖೆಯ ರಮೇಶ್ ಇತರರು ಇದ್ದರು.