ಮಡಿಕೇರಿ, ಮಾ.15 : ಕೊಡಗಿನಲ್ಲಿ ರೈಲು ಮಾರ್ಗ ಮತ್ತು ಹೆದ್ದಾರಿ ವಿಸ್ತರಣೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವವರು ಅಭಿವೃದ್ಧಿ ವಿರೋಧಿ ಮನೋಸ್ಥಿತಿಯ ಪರಿಸರ ವಾದಿಗಳು ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ಯೋಜನೆಗಳಿಗೆ ತಡೆಯೊಡ್ಡುವವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ಜಿಲ್ಲಾ ಒಕ್ಕಲಿಗರ ಸಂಘಧ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಾತನಾಡಿ, ಕೊಡಗಿಗೆ ರೈಲ್ವೆ ಮಾರ್ಗ ಬರುವದನ್ನು ಶೇ. 90ಕ್ಕೂ ಹೆಚ್ಚು ಜನ ಸ್ವಾಗತಿಸುತ್ತಿದ್ದಾರೆ. ಆದರೆ ಪರಿಸರ ವಾದಿಗಳು ಹಾಗೂ ಅವರೊಂದಿಗೆ ಕೈಜೋಡಿಸಿರುವ ಕೆಲವರು ವಿನಾಕಾರಣ ವಿರೋಧಿ ಸುತ್ತಿದ್ದಾರೆ ಎಂದು ಆರೋಪಿಸಿದರು. ರೈಲ್ವೇ ಯೋಜನೆ ಪರ ಇರುವವರೊಂದಿಗೆ ಚರ್ಚೆ ನಡೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಘ ಕಾರ್ಯ ನಿರ್ವಹಿಸಲಿದೆ. ರೈಲು ಯೋಜನೆ ಬೇಕು ಎನ್ನುವವರು ನಮ್ಮೊಡನೆ ಕೈ ಜೋಡಿಸಲಿ ಎಂದು ಮನವಿ ಮಾಡಿದರು. ಸಂಘದ ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿ, ರೈಲು ಮಾರ್ಗವನ್ನು ವಿರೋಧಿಸುತ್ತಿರುವ ಪರಿಸರವಾದಿಗಳಿಗೆ ಜಿಲ್ಲೆಯ ಜನ ಬಲ ತುಂಬಲು ಮುಂದಾದರೆ ಮುಂದೊಂದು ದಿನ ಜನತೆಯೇ ತಮ್ಮ ಬಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಯಾವದೇ ಕಾರಣಕ್ಕೂ ಜನತೆ ಪರಿಸರವಾದಿಗಳ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದರು.(ಮೊದಲ ಪುಟದಿಂದ) ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಪರಿಸರವಾದಿಗಳು ಮಾಡಿದರೆ ಇದರ ವಿರುದ್ಧ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಲಚೇರಿ-ಮೈಸೂರು ರೈಲು ಮಾರ್ಗದ ಯೋಜನೆ ವಿಚಾರದಲ್ಲಿ ದಕ್ಷಿಣ ಕೊಡಗಿನ ಜನರ ಭಾವನೆಗೆ ಗೌರವ ನೀಡುವದಾಗಿ ಸ್ಪಷ್ಟಪಡಿಸಿದ ಅವರು, ಕುಶಾಲನಗರ ದವರೆಗೂ ರೈಲು ಮಾರ್ಗ ಬೇಡ ಎನ್ನುವವರ ಸಂಖ್ಯೆ ಹುಟ್ಟಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಅಭಿವೃದ್ಧಿಗೆ ಯಾವ ಯೋಜನೆ ತಂದರೂ ಬೇಡ ಎನ್ನುವವರ ದೊಡ್ಡ ಪರಂಪರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆÉ. ರೈಲು, ಹೆದ್ದಾರಿ ಸೇರಿದಂತೆ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೂ ವಿರೋಧ ವ್ಯಕ್ತವಾಗುತ್ತಿದೆ. ಕೊಡಗು ಜಿಲ್ಲೆಗೆ ರೈಲು ಮಾರ್ಗವೇ ಬೇಡ ಎನ್ನುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡಲಾಗುತ್ತಿದೆ ಎಂದು ಶಶಿಧರ್ ಆರೋಪಿಸಿದರು.
ರೈಲು ಮಾರ್ಗ ಕುಶಾಲನಗರ ಪ್ರವೇಶಿಸುವದನ್ನು ತಡೆದರೆ ಉಗ್ರ ರೀತಿಯ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಮೈಸೂರು ಮಾತ್ರವಲ್ಲದೆ ಸಕಲೇಶಪುರದ ಮೂಲಕವೂ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವÀ ರೈಲು ಮಾರ್ಗದ ಅಗತ್ಯತೆ ಜಿಲ್ಲೆಗೆ ಇದೆ ಎಂದು ಅಭಿಪ್ರಾಯ ಪಟ್ಟರು.
ರೈಲು ಮಾರ್ಗದ ಬೇಡಿಕೆ ಗುಂಡೂರಾವ್ ಅವರು ಮುಖ್ಯಮಂತ್ರಿ ಗಳಾಗಿದ್ದ ಕಾಲದಿಂದಲೂ ಕೇಳಿ ಬರುತ್ತಿದೆ. ರೈಲು ಮಾರ್ಗಕ್ಕೆ ಕುಶಾಲನಗರದವರೆಗೂ ಸರ್ವೇ ಕಾರ್ಯವು ನಡೆದಿತ್ತು. ಕೊಡಗಿಗೆ ರೈಲ್ವೆ ಮಾರ್ಗವಾದರೆ ಆದರಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಅನುಕೂಲವಾಗಲಿದೆ. ಆದರೆ ರೈಲು ಮಾರ್ಗವನ್ನು ವಿರೋಧಿಸುವ ಮೂಲಕ ಕೊಡಗನ್ನು ಅಪಖ್ಯಾತಿಗೆ ಗುರಿ ಮಾಡಲಾಗುತ್ತಿದೆ ಎಂದು ಶಶಿಧರ್ ಟೀಕಿಸಿದರು.
ರೈಲು ಮಾರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯವನ್ನು ಕೂಡ ಮಾಡಲಾಗುತ್ತದೆ. ರೈಲು ಮಾರ್ಗವನ್ನು ತಡೆಯುವ ಹುನ್ನಾರವನ್ನು ಪರಿಸರವಾದಿಗಳು ಮುನ್ನಡೆಸಿದ್ದೇ ಆದರೆ ಹೋರಾಟದ ಕಿಚ್ಚು ಹೆಚ್ಚಾಗುತ್ತದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷರು ಗಳಾದ ವಿ.ಪಿ.ಸುರೇಶ್, ಶಿವಯ್ಯ, ನಿರ್ದೇಶಕ ಪೊನ್ನಪ್ಪ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಉಪಸ್ಥಿತರಿದ್ದರು.