ಭಾಗಮಂಡಲ, ಮಾ. 1: ಇಂದು ಇಲ್ಲಿ ವಿವಿಧ ಪೂಜೆ ಹೋಮ ಹವನಗಳೊಂದಿಗೆ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಸಾಯಿ ಸ್ವರ್ಗ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಉದ್ಯಮಿ ದೇವಂಗೋಡಿ ಹರೀಶ್ ಮತ್ತು ನಳಿನಿ ಹರೀಶ್ ಭೂಮಿ ಪೂಜೆ ನೆರವೇರಿಸಿದರು. ಸಾಯಿ ಸ್ವರ್ಗ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಭಾಗಮಂಡಲದ ಪೆಟ್ರೋಲ್ ಬಂಕ್ ಬಳಿ ಎರಡು ಏಕರೆ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದ್ದು ಎರಡರಿಂದ ಮೂರು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಹರೀಶ್ ಹೇಳಿದರು.
ಬಾಬಾ ಮಂದಿರ ನಿರ್ಮಾಣ ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು ಬಳಿಕ ವೃದ್ಧಾಶ್ರಮ, ಅನಾಥಾಶ್ರಮ, ಪ್ರಾಕೃತಿಕ ಚಿಕಿತ್ಸಾಲಯ ನಿರ್ಮಾಣಗೊಳ್ಳಲಿದೆ. ಜೊತೆಗೆ ಉಚಿತ ಆರೋಗ್ಯ ತಪಾಸಣಾ ಕೇಂದ್ರ ಕೂಡ ನಿರ್ಮಾಣವಾಗಲಿದ್ದು ಭಾಗಮಂಡಲ ತಲಕಾವೇರಿ ಸೇರಿದಂತೆ ಮಂದಿರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಲಾಗಿದ್ದು ಪ್ರತಿದಿನ ಅನ್ನದಾನ ಕೂಡ ನಡೆಯಲಿದೆ. ಪರಿಸರ ಉಳಿಸುವ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಸಂದರ್ಭ ಡಾ.ರಾಜೇಶ್, ಕುದುಪಜೆ ರಾಜೇಶ್, ಸೂರಿ ಕಾಕೇರಿ, ಸ್ಥಳೀಯರಾದ ನಾರಾಯಣಾಚಾರ್, ಹೊಸೂರು ಸತೀಶ್ಕುಮಾರ್, ಕುದುಪಜೆ ಪ್ರಕಾಶ್, ಕುದುಕುಳಿ ಭರತ್, ಕುಯ್ಯಮುಡಿ ಮನೋಜ್, ಕೆದಂಬಾಡಿ ರಘುನಾಥ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.