ಮಡಿಕೇರಿ, ಮಾ. 1: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ವ್ಯಾಪ್ತಿಯ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ ತಾ. 2 ಮತ್ತು 3 ರಂದು ‘ಪಶ್ಚಿಮ ಘಟ್ಟದ ಕಾಡು ಹಣ್ಣುಗಳ ಸಂರಕ್ಷಣೆ ಮತ್ತು ಬಳಕೆ’ ಕುರಿತಾದ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ತೋಟಗಾರಿಕೆ ಅಭಿವೃದ್ಧಿ ಸಂಘ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ಬಗೆಯ ಕಾಡು ಹಣ್ಣುಗಳು, ಕಾಣಸಿಗುತ್ತವೆ. ಈ ಕಾಡುಹಣ್ಣುಗಳು ಹಲವಾರು ಔಷಧೀಯ ಗುಣಗಳನ್ನು ಹಾಗೂ ಪೋಷಕಾಂಶಗಳನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಇವುಗಳ ಸಂತತಿ ಅಳಿವಿನ ಅಂಚಿನಲ್ಲಿದೆ. ಇವುಗಳನ್ನು ಸಂರಕ್ಷಿಸಿ ಬೇಸಾಯಕ್ಕೆ ತರುವ ತುರ್ತು ಅಗತ್ಯ ಇರುವದರಿಂದ, ಇವುಗಳ ಸಂರಕ್ಷಣೆಗೆ ಬೇಕಾದ ರೂಪು ರೇಷೆಗಳನ್ನು ತಯಾರುಮಾಡಿ ಅನುಷ್ಠಾನಕ್ಕೆ ತರುವದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

ಈ ವಿಚಾರಗೋಷ್ಠಿಯು ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು , ಭಾರತೀಯ ತೋಟಗಾರಿಕಾ ಮಿಷನ್, ಬೆಂಗಳೂರು ಹಾಗೂ ಟಾಟಾ ಕಾಫಿ ಲಿ. ಪಾಲಿಬೆಟ್ಟ ಇವರುಗಳ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಈ ಗೋಷ್ಠಿಯಲ್ಲಿ, ರಾಷ್ಟ್ರದ ವಿವಿಧ ಭಾಗಗಳಿಂದ ಬರುವ ವಿಜ್ಞಾನಿಗಳು ಒಟ್ಟು 30 ಸಂಶೋಧನಾ ಲೇಖನೆಗಳನ್ನು ಮಂಡಿಸಲಿದ್ದಾರೆ. ವಿಚಾರ ಗೋಷ್ಠಿಯ ಅಂಗವಾಗಿ ಕಾಡು ಹಣ್ಣುಗಳಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿ ಮತ್ತು ಸ್ಥಳೀಯ ರೈತರೊಂದಿಗಿನ ಸಂವಾದವನ್ನು ತಾ. 3 ರಂದು ಬೆಳಿಗ್ಗೆ 11.30 ಗಂಟೆಗೆ ಮಹಾವಿದ್ಯಾಲಯದ ಸಮ್ಮೇಳನಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.