ಮಡಿಕೇರಿ, ಜ. 28: ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿ ಅಂದಾಜು ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದ ಯೋಜನೆಯನ್ನು ಕ್ರಿಯಾಯೋಜನೆ ತಯಾರಿಸುವ ಸಂದರ್ಭ ಕೈಬಿಡಲಾಗಿದ್ದು, ಈ ಸಂಬಂಧ ದೂರು ಸಲ್ಲಿಸಲಾಗುವದೆಂದು ಹಾಕತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ವಲಯ ಅಧ್ಯಕ್ಷ ಕೆ.ಜೆ. ಶರೀನ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ಮಂದ್ರಿರ ಕುಟುಂಬಸ್ಥರು ತೆರಳುವ ರಸ್ತೆ, ಹೂಕಾಡು ಪೈಸಾರಿ ರಸ್ತೆ ಸೇರಿದಂತೆ ನಾಲ್ಕು ಕಾಮಗಾರಿಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ, ಕ್ರಿಯಾಯೋಜನೆ ತಯಾರಿಸುವ ಸಂದರ್ಭ ಸಂಬಂಧಿಸಿದ ಅಭಿಯಂತರರು ಕಾಮಗಾರಿಗಳನ್ನು ಕೈಬಿಟ್ಟಿದ್ದಾರೆ. ಈ ಸಂಬಂಧ ಉಸ್ತುವಾರಿ ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವದೆಂದು ಶರೀನ್ ತಿಳಿಸಿದ್ದಾರೆ. ಕಾಮಗಾರಿಗಳನ್ನು ಮರು ಸೇರ್ಪಡೆಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.