ಮಡಿಕೇರಿ, ಜ. 23: ಹನ್ನೆರಡನೇ ಶತಮಾನದ ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯ ಅವರು ನುಡಿದಂತೆ ನಡೆದ, ಸಮಾಜಕ್ಕೆ ಮಾದರಿಯಾಗಿ ನಡೆದುಕೊಂಡ ಮಹಾನ್ ಚೇತನ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯ ಅವರು ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ಅವರ ಸಮಕಾಲೀನರು, ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಟ ಮಾಡಿದ್ದರು. ಸುಮಾರು 150ಕ್ಕೂ ಹೆಚ್ಚ್ಚು ವಚನಗಳನ್ನು ರಚಿಸಿ, ಸಮಾಜದಲ್ಲಿ ಕ್ರಾಂತಿಕಾರಕ ಸುಧಾರಣೆ ತರಲು ಶ್ರಮಿಸಿದರು ಎಂದು ಅವರು ನುಡಿದರು.

ಸಾಹಿತಿ ಆನಂದತೀರ್ಥ ಕೆ. ಭಾರದ್ವಾಜ್ ಮಾತನಾಡಿ, ಅಂಬಿಗ ಎಂದರೆ ದೇವರು. ದೋಣಿ ನಡೆಸುವ ಅಂಬಿಗರ ಚೌಡಯ್ಯ ಅವರು ತಾವು ಮಾಡುವ ವೃತ್ತಿಯಲ್ಲಿ ದೇವರನ್ನು ಕಂಡಿದ್ದರು ಎಂದು ಪ್ರತಿಪಾದಿಸಿದರು.

ಅಸಮಾನತೆ ವಿರುದ್ಧ ಬಂಡಾಯ ಸಾರಿದ್ದ ಅಂಬಿಗರ ಚೌಡಯ್ಯ ಅವರು ಅವಿಭಕ್ತ ಕುಟುಂಬದ ಪ್ರತಿಪಾದಕ ರಾಗಿದ್ದರು. ಕುಂಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಅವಿಭಕ್ತ ಕುಟುಂಬ ಉತ್ತಮ ಎಂದು ಹೇಳಿದ್ದರು ಎಂದು ನುಡಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ಸಾಹಿತ್ಯ ರೂಪದಲ್ಲಿ ಜನರಿಗೆ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಲು ಪ್ರೇರಣೆಯಾದವರು ಅಂಬಿಗರ ಚೌಡಯ್ಯ ಎಂದು ತಿಳಿಸಿದರು. ಮಾತು ಮತ್ತು ಕೃತಿ ಒಂದೇ ರೀತಿ ಇರಬೇಕು ಎಂದು ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದ್ದರು ಎಂದು ನಗರಸಭೆ ಅಧ್ಯಕ್ಷರು ವಿವರಿಸಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾತನಾಡಿ, ಪುಣ್ಯ ಪುರುಷರು ದಾರ್ಶನಿಕರು ಸ್ವಾರ್ಥಿಗ ಳಾಗದೆ ಸಮಾಜಕ್ಕಾಗಿ ಬದುಕಿದರು. ತಮ್ಮಲ್ಲಿರುವ ಕಾಣಿಕೆಯನ್ನು ಸೇವೆ ರೂಪದಲ್ಲಿ ಮಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಅಸ್ಪøಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಇವರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ ಮಾತನಾಡಿ, 12 ನೇ ಶತಮಾನದ ಚೇತನ ಅಂಬಿಗರ ಚೌಡಯ್ಯ ಅವರ ಸಂದೇಶಗಳು ಈ ಕಾಲಕ್ಕೂ ಅನುಕರಣಿಯ. ಅಂದಿನ ಚಿಂತನೆಗಳು ಇಂದಿಗೂ ಸಹ ಅನ್ವಯಿಸುತ್ತವೆ. ಸಮಾಜದ ನ್ಯೂನ್ಯತೆ ತಿದ್ದಿದವರು ತನಗಾಗಿ ಬದುಕಲಿಲ್ಲ, ಸಮಾಜಕ್ಕಾಗಿ ಬದುಕಿದವರು ಎಂದು ತಿಳಿಸಿದರು.

ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ನಗರಸಭೆ ಆಯುಕ್ತೆ ಶುಭಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಡಾ. ಆನಂದ್, ಕಾರ್ಮಿಕ ಇಲಾಖೆ ರಾಮಕೃಷ್ಣ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು, ಷಡಕ್ಷರಿ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.