ಶನಿವಾರಸಂತೆ, ಜ. 16: ಸಮೀಪದ ಬೆಂಬಳೂರು ಗ್ರಾಮದ ಇತಿಹಾಸ ಪ್ರಸಿದ್ದ ಬಾಣಂತಮ್ಮ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಸಾವಿರಾರು ಮಂದಿ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.
ಬೆಳಿಗ್ಗೆ 9 ರಿಂದ ಬಾಣಂತಮ್ಮನ ಜಾತ್ರೆ ಆರಂಭವಾಯಿತು. ಬಾಣಂತಮ್ಮ ಕೆರೆಯಲ್ಲಿ ಗಂಗಾಸ್ನಾನ, ಪೂಜೆಯ ಬಳಿಕ ಬಾಣಂತಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಜಾತ್ರಾ ಮೈದಾನದ ಮಂಟಪಕ್ಕೆ ಮೆರವಣಿಗೆಯಲ್ಲಿ ತಂದು ಇರಿಸಲಾಯಿತು. ಭಕ್ತಾದಿಗಳು ಹೂ, ಹಣ್ಣುಕಾಯಿ ಅರ್ಪಿಸಿ ಪೂಜಿಸಿದರು. ಬೆಳಿಗ್ಗೆ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನ 1 ಗಂಟೆಗೆ ಬಾಣಂತಮ್ಮ ದೇವಿಯನ್ನು ಪುನಃ ಮೆರವಣಿಗೆಯಲ್ಲಿ ತಂದು ದೇವಸ್ಥಾನದಲ್ಲಿ ಇರಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ಬಾಣಂತಮ್ಮನ ಮಗ ಕುಂಟ ಕುಮಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಕುಂಟುತ್ತಲೇ ಮೆರವಣಿಗೆಯಲ್ಲಿ ಜಾತ್ರಾ ಮಂಟಪಕ್ಕೆ ತಂದು ಇರಿಸಿ ಪೂಜಿಸಲಾಯಿತು. ಭಕ್ತಾದಿಗಳು ಪೂಜೆ ಸಲ್ಲಿಸಿದ ಬಳಿಕ 5.30ಕ್ಕೆ ಮರಳಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ಜಾತ್ರಾ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.