ಕುಶಾಲನಗರ, ಜ. 8 : ಸೃಜನಶೀಲ ಹಾಗೂ ಸಂವೇದನಾ ಶೀಲ ಬರಹಗಳು ಸಾರ್ವಕಾಲಿಕ ಶ್ರೇಷ್ಠವಾದ್ದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕವಿತಾ ರೈ ಅವರ ಕೃತಿಗಳ ಮರುಓದು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವದೇ ಕೃತಿಗಳು ಕೂಡ ವಾಸ್ತವ ಅಂಶಗಳನ್ನು ಹೊಂದಿದಲ್ಲಿ ಜನಸಾಮಾನ್ಯರ ಮನಸ್ಸಿಗೆ ಹತ್ತಿರವಾಗುತ್ತದೆ. ಮರುಓದು ಎಂಬದು ಕಾಲಕಾಲಕ್ಕೆ ಉಂಟಾಗುವ ಬದಲಾವಣೆ ಹಾಗೂ ಸಮಸ್ಯೆಗಳ ಅರ್ಥೈಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಈ ಮೂಲಕ ನಮ್ಮೊಳಗಿನ ಆಂತರಿಕ ವೈಚಾರಿಕೆಯನ್ನು ಬಡಿದೆಬ್ಬಿಸಿ ಸಮಾಲೋಚನೆ, ಸಂವಾದಕ್ಕೆ ಸಜ್ಜುಗೊಳಿಸುತ್ತದೆ ಎಂದರು.

ಹಲವು ಕೃತಿಗಳು, ನಾಟಕಗಳು, ಕಾದಂಬರಿಗಳು ಹಲವರಿಗೆ ಹಲವು ರೀತಿಯಲ್ಲಿ ಸ್ಫೂರ್ತಿ ನೀಡಿದೆ. ಕೆಲವು ಸಿನಿಮಾಗಳಾಗಿ ಹೊರಬಂದು ಜನರ ಮನಸ್ಸಿನಲ್ಲಿ ನೆಲೆನಿಂತಿದೆ ಎಂದರು. ನಿರಂತರ ಓದು, ಮರು ಓದಿನ ಮೂಲಕ ಕೃತಿಗಳಲ್ಲಿ ಅಡಕ ವಾಗಿರುವ ಹಲವು ಅಂಶಗಳನ್ನು ಬಹಳ ಆಳವಾಗಿ ಮನದಟ್ಟು ಮಾಡಿ ಕೊಳ್ಳಲು ಸಾಧ್ಯವಿದೆ ಎಂದರು.

ಪ್ರಗತಿ ಎಂಬದು ಅಭಿವೃದ್ಧಿಯ ಸೂಚಂಕ್ಯವಾಗಿದ್ದರೂ ಕೂಡ ಪರಿಸರಕ್ಕೆ ಮಾರಕವಾಗಿದೆ. ಆಧುನಿಕತೆ, ಅಭಿವೃದ್ಧಿ ಕಾರ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ನಾಶಗೊಳಿಸುತ್ತಿದೆ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಎಂ.ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಆಶಯ ನುಡಿಗಳಾಡಿದರು. ಸಿದ್ದರಾಮಯ್ಯ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಂತರ ನಡೆದ ವಿಚಾರ ಸಂಕಿರಣದಲ್ಲಿ ಲೋಕಮುದ್ರಾ ನಾಟಕದಲ್ಲಿ ಅಭಿವ್ಯಕ್ತಗೊಂಡಿರುವ ಸ್ತ್ರೀ ಸಂವೇದನೆ ಕುರಿತಾಗಿ ಡಾ.ಉತ್ನಳ್ಳಿ ಭೈರಪ್ಪ ವಿಷಯ ಮಂಡಿಸಿದರು, ನಾಟಿ ಓಟ, ಕೊಡಗಿನ ಕಥೆಗಳಲ್ಲಿ ನಿರೂಪಿತಗೊಂಡಿರುವ ತಾತ್ವಿಕತೆಗಳ ಸ್ವರೂಪದ ಕುರಿತಾಗಿ ಡಾ.ಬಿ.ಪ್ರಕಾಶ್ ವಿಷಯ ಮಂಡಿಸಿದರು, ಹಕ್ಕಿಹರಿವ ನೀರು, ನೀರತೇರು, ನೀರ ತೇಜಿಯನೇರಿ ಮತ್ತು ನೀರು ಮಾಡು ಕವನ ಸಂಕಲನಗಳ ತಾತ್ವಿಕತೆಗಳ ಅನುಸಂದಾನ ಕುರಿತಾಗಿ ಜಮೀರ್ ಅಹಮ್ಮದ್ ವಿಷಯ ಮಂಡಿಸಿದರು.

ವಿಶ್ವವಾಣಿ ದಿನಪತ್ರಿಕೆ ಸಹಾಯಕ ಸಂಪಾದಕ ಬಿ.ಗಣಪತಿ, ಕಾಲೇಜು ಪ್ರಾಧ್ಯಾಪಕ ಕಾಶಿಕುಮಾರ್, ಸಾಹಿತಿಗಳಾದ ಶ್ವೇತಾ ಮಡಪಾಡಿ, ಸಹನಾ ಕಾಂತಬೈಲು, ಕಾಜೂರು ಸತೀಶ್ ಇದ್ದರು.

ರಶ್ಮಿ ಪ್ರಾರ್ಥಿಸಿದರು, ಪ್ರಿಯಾಂಕ ಮತ್ತು ನಂಜುಂಡಸ್ವಾಮಿ ನಿರೂಪಿಸಿದರು, ರಮೇಶ್‍ಚಂದ್ರ ಸ್ವಾಗತಿಸಿದರು, ದೀಪಾ ವಂದಿಸಿದರು.