ಮಡಿಕೇರಿ, ಜ. 3: ಕಾವೇರಿ ನದಿ ಕಲುಷಿತಗೊಳ್ಳುವದನ್ನು ತಡೆಯಲು ಮತ್ತು ನದಿಯ ಪಾವಿತ್ರ್ಯತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ ನೀಡಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜೀವನದಿ ಕಲುಷಿತಗೊಳ್ಳುವದನ್ನು ತಪ್ಪಿಸಲು ಶಾಶ್ವತ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸರಕಾರ ಒಪ್ಪಂದ ಮಾಡಿಕೊಂಡಿದ್ದು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವದಾಗಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮೂಲ ಕಾವೇರಿ ಸ್ಥಾನದಲ್ಲಿ ಪ್ರವಾಸಿಗರಿಂದ ಹಲವು ರೀತಿಯಲ್ಲಿ ನದಿ ತಟಗಳು ಸಂಪೂರ್ಣ ಕಲುಷಿತಗೊಳ್ಳುವದ ರೊಂದಿಗೆ ನದಿಗೆ ನೇರವಾಗಿ ತ್ಯಾಜ್ಯಗಳು ಸೇರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಸ್ಥಳೀಯ ಆಡಳಿತಗಳಿಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಯಾವದೇ ಸ್ಥಳಗಳಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಸೇರದಂತೆ ಎಚ್ಚರವಹಿಸಲು ಸೂಚಿಸಲಾಗಿದೆ ಎಂದರು.

ಶಬರಿಮಲೆಯ ಪಂಪಾ ವ್ಯಾಪ್ತಿಯಲ್ಲಿ ಭಕ್ತಾದಿಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹುತೇಕ ಯಶಸ್ಸು ಕಂಡಿದ್ದು ಇದೇ ರೀತಿ ತಲಕಾವೇರಿ, ಭಾಗಮಂಡಲ ಮುಂತಾದ ಕ್ಷೇತ್ರಗಳಲ್ಲಿ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳ ಲಾಗುವದು. ಸ್ಥಳೀಯ ಆಡಳಿತಗಳ ಮೂಲಕ ಸೂಚನಾ ಫಲಕಗಳನ್ನು ಅಳವಡಿಸಲು ಸಲಹೆ ನೀಡಲಾಗು ವದು. ಸ್ವಚ್ಛತೆ ನಿಟ್ಟಿನಲ್ಲಿ ಸ್ಥಳೀಯರು ಕೂಡ ಆಡಳಿತ ವ್ಯವಸ್ಥೆ ಯೊಂದಿಗೆ ಕೈ ಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸದ್ಯದಲ್ಲಿಯೇ ಸಿಎಸ್‍ಆರ್ ಸಭೆ ಕರೆಯಲಾಗುವದು. ಕಾವೇರಿ ನದಿ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯರು ಮುಂದೆ ಬರಬೇಕು ಎಂದಿರುವ ಜಿಲ್ಲಾಧಿಕಾರಿಗಳು ಸ್ವಚ್ಛ ಕೊಡಗು ಹಾಗೂ ಸ್ವಚ್ಛ ಕಾವೇರಿ ನಿರ್ಮಾಣಕ್ಕಾಗಿ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ರೂಪಿಸಲಾಗುವದು ಎಂದು ತಿಳಿಸಿದರು. ಇದೇ ಸಂದರ್ಭ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಭಾಗಮಂಡಲದಲ್ಲಿ ಕಂಡು ಬಂದ ಅಶುಚಿತ್ವದ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಲಾಗಿದೆ. ಪ್ರವಾಸಿಗರಿಗೆ ಅಡುಗೆ ಮಾಡಲು ದಾಸೋಹ ಭವನ ನಿರ್ಮಿಸಲು ಚಿಂತನೆ ಹರಿಸಲಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಭವನದಲ್ಲಿ ಪ್ರವಾಸಿಗರಿಗೆ ಅಡುಗೆ ಮಾಡಲು ಅವಕಾಶ ಕಲ್ಪಿಸಲಾಗುವದು. ತ್ಯಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾ ಗುವದು. ನಿರ್ಧಿಷ್ಟ ಸ್ಥಳ ಹೊರತಾಗಿ ಬೇರೆಡೆ ರಸ್ತೆ ಬದಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರವಾಸಿಗರು ಅಡುಗೆ ಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು.

ಬೇಡಿಕೆಗಳು

ಬೇಸಿಗೆಯ ಅವಧಿಯಲ್ಲಿ ಕಾವೇರಿ ನದಿಯಲ್ಲಿ ವಾಣಿಜ್ಯ ಚಟುವಟಿಕೆ ಗಳನ್ನು ನಿರ್ಬಂಧಿಸುವದು, ನದಿಗೆ ತೆರಳಲು ಅಕ್ರಮವಾಗಿ ದಾರಿ ನಿರ್ಮಿಸುವ ಮೂಲಕ ಅಘೋಷಿತ ಪ್ರವಾಸಿ ಕೇಂದ್ರ ನಿರ್ಮಿಸಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವದು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾವೇರಿ ನೀರಾವರಿ ನಿಗಮ, ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಮೂಲಕ ಜಿಲ್ಲೆಯ ಪರಿಸರ ಹಾನಿ ಹಾಗೂ ಕಾವೇರಿ ನದಿ ಕಲುಷಿಕೆಯನ್ನು ಶಾಶ್ವತವಾಗಿ ತಪ್ಪಿಸಲು ಯೋಜನೆ ಗಳನ್ನು ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕರಾದ ಡಿ.ಆರ್. ಸೋಮಶೇಖರ್ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.