ಮಡಿಕೇರಿ. ಡಿ.22: ಜನಪದ ಸಂಸ್ಕøತಿಯೇ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳಿಗೆ ತಿಳಿಸುವ ಅತ್ಯಗತ್ಯತೆಯಿದ್ದು, ಹಿಂದಿನ ಕಾಲದ ಆಟಗಳನ್ನು ನಶಿಸಲು ಬಿಡಬಾರದು ಎಂದು ಮಡಿಕೇರಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಗಾಯತ್ರಿ ಹೇಳಿದ್ದಾರೆ.

ಕಡಗದಾಳು ಪ್ರೌಢÀಶಾಲೆಯಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಬಿ.ಇ.ಓ. ಕಚೇರಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿತ ಗ್ರಾಮೀಣ ಕ್ರೀಡಾಕೂಟವನ್ನು ಲಗೋರಿ ಆಟದ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಲೇ ಇರುವದರಿಂದಾಗಿ ಗ್ರಾಮೀಣ ಕ್ರೀಡೆಗಳತ್ತ ಆಸಕ್ತಿ ಕಮ್ಮಿಯಾಗಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವದಲ್ಲಿ ಜನಪದೀಯ ಕ್ರೀಡೆಗಳನ್ನೇ ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು. ಗ್ರಾಮೀಣ ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ರಾಜರ ಕಾಲದಲ್ಲಿಯೂ ಗ್ರಾಮೀಣ ಕ್ರೀಡೆಗಳಿಗೆ ಅಪಾರವಾದ ಮಹತ್ವವಿತ್ತು. ಹಿಂದಿನ ಕಾಲದಲ್ಲಿ ಗ್ರಾಮೀಣ ಆಟಗಳು ಸಂಸ್ಕøತಿ, ಒಗ್ಗಟ್ಟಿನ ಪ್ರತೀಕವಾಗಿದ್ದವು. ಹಳ್ಳಿಯ ಒಳ್ಳೆ ಮನಸ್ಸುಗಳನ್ನು ಗ್ರಾಮೀಣ ಕ್ರೀಡೆಗಳು ಬಿಂಬಿಸುತ್ತಿದ್ದವು ಎಂದು ಹೇಳಿದರು.

ಜಾನಪದ ಪರಿಷತ್ ಪ್ರದಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ಜಾತಿ, ಧರ್ಮದ ದ್ವೇಷಾಸೂಯೆಗಳಿಂದ ದೂರವಿರುವ ಗ್ರಾಮೀಣ ಕ್ರೀಡೆಗಳು ಉತ್ತಮ ಸಮಾಜದ ಪ್ರತಿಬಿಂಬದಂತಿದ್ದು, ಪ್ರಾಚೀನ ಆಟಗಳೇ ಇಂದಿನ ಆಧುನಿಕ ದಿನಗಳಲ್ಲಿ ಆಧುನಿಕ ಸ್ವರೂಪ ಪಡೆದಿದೆ ಎಂದು ಹೇಳಿದರು. ಮೊಬೈಲ್, ಟಿ.ವಿ.ಗಳ ದಾಸರಾಗಿರುವ ಇಂದಿನ ಮಕ್ಕಳಲ್ಲಿ ಗ್ರಾಮೀಣ ಕ್ರೀಡೆಗಳ ತಿಳುವಳಿಕೆ ಮೂಡಿಸುವಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ ಎಂದರು. ನಾವಿಂದು ವೈಜ್ಞಾನಿಕವಾಗಿ ಬೆಳೆದಿದ್ದೆವೇ ವಿನಃ ಹೃದಯವಂತಿಕೆಯನ್ನು ನಿರೀಕ್ಷಿತ ರೀತಿಯಲ್ಲಿ ಬೆಳೆಸಿಕೊಂಡಿಲ್ಲ ಎಂದೂ ಮುನೀರ್ ವಿಷಾದಿಸಿದರು.

ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕಿ ಜಯಲಕ್ಷ್ಮೀ ಬಾಯಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡಾಕೂಟದ ಮೂಲಕ ಮಕ್ಕಳಲ್ಲಿ ಹಳ್ಳಿಯ ಆಟಗಳ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಇಂಥ ಕ್ರೀಡಾಕೂಟಗಳು ನೆರವಾಗುತ್ತಿವೆ ಎಂದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ತಾಲೂಕು ಗ್ರಾಮೀಣ ಕ್ರೀಡಾಕೂಟಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನ ದೊರಕಿದ್ದು 17 ಶಾಲೆಗಳ 364 ಕ್ರೀಡಾಪಟುಗಳು ವಿವಿಧ ಗ್ರಾಮೀಣ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವದು ಗ್ರಾಮೀಣ ಕ್ರೀಡಾಕೂಟದ ಅಗತ್ಯತೆಗೆ ನಿದರ್ಶನ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಉಪಾಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್, ಯೋಜನಾ ನಿರ್ದೇಶಕ ಪಿ.ಆರ್. ರಾಜೇಶ್, ಜಾನಪದ ಪರಿಷತ್ ಕ್ರೀಡಾ ಸಂಚಾಲಕಿ ಕೆ. ಜಯಲಕ್ಷ್ಮಿ, ಜಾನಪದ ಪರಿಷತ್ ಉಪಾಧ್ಯಕ್ಷÀ ಅಂಬೆಕಲ್ ಕುಶಾಲಪ್ಪ, ರಾಣಿ ಮಾಚಯ್ಯ, ಸಂಘಟನಾ ಕಾರ್ಯದರ್ಶಿ ಉಜ್ವಲ್ ರಂಜಿತ್, ಎಂ.ಬಿ.ಜೋಯಪ್ಪ, ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಚಂದ್ರಮೋಹನ್, ಕಡಗದಾಳು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಂಗಮ್ಮ, ಕಡಗದಾಳು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಲಮ್ಮ, ಲೇಖಕಿ ಭಾಗೀರಥಿ ಹುಲಿತಾಳ ಪಾಲ್ಗೊಂಡಿದ್ದರು. ಹಸಿನಾ ಮತ್ತು ತಂಡ ಪ್ರಾರ್ಥಿಸಿ, ಆರತಿ ಹೆದ್ದಾರಿಮನೆ ನಿರೂಪಿಸಿ, ಅನಿಲ್ ಎಚ್.ಟಿ. ಸ್ವಾಗತಿಸಿ, ವಂದಿಸಿದರು.