ಮಡಿಕೇರಿ, ಡಿ. 22: ಹಲವು ಹೋರಾಟಗಳ ನಂತರವೂ ನಗರದಲ್ಲಿರುವ ಯುವ ಭವನವನ್ನು ಜಿಲ್ಲಾಡಳಿತ ಜಿಲ್ಲಾ ಯುವ ಒಕ್ಕೂಟದ ಸುಪರ್ದಿಗೆ ವಹಿಸದ ಕಾರಣ ಒಕ್ಕೂಟದ ಜಿಲ್ಲಾಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿರುವದಾಗಿ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಯುವ ಭವನವನ್ನು ಯುವ ಚಟುವಟಿಕೆಗಳಿಗಾಗಿ ಯುವ ಒಕ್ಕೂಟದ ಸುಪರ್ದಿಗೆ ಬಿಟ್ಟು ಕೊಡಬೇಕೆಂದು, ಜಿಲ್ಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ 2013 ರಿಂದ ಇಲ್ಲಿಯವರೆಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಬರಲಾಗಿದೆ. ಅಲ್ಲದೆ ಪ್ರತಿಭಟನೆಯನ್ನು ಕೂಡ ನಡೆಸಲಾಗಿದೆ. ಆರು ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಮುಂದಿನ ಆರು ತಿಂಗಳೊಳಗೆ ಯುವ ಭವನವನ್ನು ಬಿಟ್ಟುಕೊಡುವದಾಗಿ ಭರವಸೆ ನೀಡಿದ್ದರು.
ಯುವ ಸಮೂಹದ ಉತ್ಸಾಹಕ್ಕೆ ಪೂರಕ ವಾತಾವರಣವನ್ನು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸೃಷ್ಟಿಸದೆ ಇರುವದರಿಂದ ಬೇಸರಗೊಂಡು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿರುವದಾಗಿ ಎಂ.ಬಿ. ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.