ವೀರಾಜಪೇಟೆ, ಡಿ. 12: ವೀರಾಜಪೇಟೆ ಬಳಿಯ ಎಸ್‍ವೈಎಸ್ ಹಾಗೂ ಎಸ್‍ಎಸ್‍ಎಫ್ ಶಾಖೆಗಳ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ತಾ. 13ರಂದು (ಇಂದು) ಗುಂಡಿಕೆರೆಯಲ್ಲಿ ಹುಬ್ಬುರಸೂಲ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಸ್‍ವೈಎಸ್ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಆಲಿ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಿಯಾಕತ್ ಅವರು ಗುಂಡಿಕೆರೆಯ ಶಾಫಿ ಮಸೀದಿ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ನಡೆಯುವ ಸಮಾವೇಶದಲ್ಲಿ ಕೊಲ್ಲಂನ ಡಾ. ಮುಹಮ್ಮದ್ ಫಾರೂಖ್ ನಈಮಿ ಅಲ್ ಬುಖಾರಿ ಮುಖ್ಯ ಭಾಷಣ ಮಾಡುವರು. ಎಂ.ಎ. ಅಬ್ಬಾಸ್ ಅವರ ಅಧ್ಯಕ್ಷತೆಯಲ್ಲಿ ಗುಂಡಿಕೆರೆ ಖತೀಬರಾದ ಮಹಮ್ಮದ್ ನಿಸಾರ್ ರಹ್ಮಾನಿ ಸಮಾವೇಶದ ಉದ್ಘಾಟನೆ ಮಾಡುವರು ಎಂದು ತಿಳಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಅಶ್ರಫ್ ಅಹ್ಸನಿ, ಹಫೀಳ್ ಸಹದಿ, ಪಿ.ಎ.ಇಸ್ಮಾಯಿಲ್ ಸಖಾಫಿ, ಉಮರ್ ಸಖಾಫಿ, ಕರೀಂ ಫಾಳಿಲಿ, ಕೆ.ವೈ. ಅಬ್ದುರ್ರಹಮಾನ್, ರಫೀಕ್, ಹನೀಫ್ ಸಖಾಫಿ ಎ.ಇ.ಉಬೈದುಲ್ಲ ಎನ್.ಎಂ.ಷಂಶುದ್ದೀನ್ ಹಾಗೂ ಎಂ.ಎ.ಶಫೀಕ್ ಭಾಗವಹಿಸಲಿರುವರು ಎಂದು ಸಿ.ಪಿ.ಅಹಮ್ಮದ್ ಮದನಿ ತಿಳಿಸಿದರು.

ಗುಂಡಿಕೆರೆಯ ಎಸ್.ಎಸ್.ಎಫ್‍ನ ಅಧ್ಯಕ್ಷ ಉಬೈದುಲ್ಲ ಮಾತನಾಡಿ ಸಮಾವೇಶದಲ್ಲಿ ಪ್ರವಾದಿ ಮಹಮ್ಮದ್‍ರ ಸಂದೇಶ, ನಡವಳಿಕೆ ಹಾಗೂ ಧರ್ಮಪ್ರೇಮದ ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಗುಂಡಿಕೆರೆಯ ಎಸ್.ವೈ.ಎಸ್.ನ ಪ್ರಧಾನ ಕಾರ್ಯದರ್ಶಿ ಎಂ.ಎ.ಶಫೀಕ್ ಮಾತನಾಡಿ ಸಮಾವೇಶದಲ್ಲಿ ಸ್ತ್ರೀಯರಿಗೂ ಪ್ರತ್ಯೇಕ ಸ್ಥಳ ಹಾಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ದುಬಾಯಿ ಸಮಿತಿ ಸದಸ್ಯ ಎಂ.ಎ. ಅಕ್ತರ್ ಉಪಸ್ಥಿತರಿದ್ದರು.