ಮಡಿಕೇರಿ, ಡಿ. 8: ನಾವು ಶೈಕ್ಷಣಿಕವಾಗಿ ಮುಂದೆ ಬಂದರೆ ದೇಶವನ್ನೇ ಬದಲಾಯಿಸಬಹುದು. ಹಾಗೆಯೇ ಅಸಮಾನತೆಯನ್ನು ಹೋಗಲಾಡಿಸಬಹುದು. ತಂದೆ-ತಾಯಿಗಳಿಗೆ ಹಾಗೂ ಗುರು ಹಿರಿಯರಿಗೆ ಗೌರವ ನೀಡಬೇಕು. ನಾವು ಎತ್ತರಕ್ಕೆ ಬೆಳೆದರೆ ನಮ್ಮ ಸಮಾಜದ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣದಲ್ಲಿ ಶಿಕ್ಷಕರ ಜವಾಬ್ದಾರಿ ಬಹಳ ಮುಖ್ಯ. ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಉತ್ತಮ ಮಟ್ಟಕ್ಕೆ ತಲುಪಬೇಕು ಎಂದು ಆಶಿಸಿದರು. ಉತ್ತಮ ಮಟ್ಟದ ಶಿಕ್ಷಣ ಮತ್ತು ಸಂಘಟನೆ ಎರಡು ಬಹಳ ಮುಖ್ಯ. ಶಿಕ್ಷಣದಲ್ಲಿ ನಮ್ಮ ಜಿಲ್ಲೆ ಉತ್ತಮ ಸ್ಥಾನಕ್ಕೆ ತಲುಪಬೇಕು ಎಂದು ಅವರು ಹೇಳಿದರು. ಶಾಸಕ ಸುನಿಲ್ ಸುಬ್ರಮಣಿ ಮಾತನಾಡಿ ಶಿಕ್ಷಕರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಆಧುನಿಕ ನೆಲಗಟ್ಟಿನಲ್ಲಿ ಶಿಕ್ಷಕರು ಸಮಾಜವನ್ನು ತಿದ್ದಬೇಕು. ಗುರುಗಳಿಗೆ ವಿದ್ಯಾರ್ಥಿಗಳು ವಿಧೇಯರಾಗಿರಬೇಕು ಎಂದು ಹೇಳಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಜ್ಞಾನದ ಬೆಳವಣಿಗೆಗೆ ಜ್ಞಾನ ದೇಗುಲವನ್ನು ಶಿಕ್ಷಕರು ಸ್ಥಾಪನೆ ಮಾಡಬೇಕು. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ನಾವು ಬೇರೆಯವರಿಗೆ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು.

ನಮ್ಮ ಚಿಂತನೆ ಕ್ರೀಯಾಶೀಲತೆ ಯಾಗಿರಬೇಕು. ಸೇವೆ ನಿಸ್ವಾರ್ಥವಾಗಿರಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಜ್ಞಾನದ ಕಣಜವಾಗಿ ರೂಪಿಸಬೇಕು. ಹಾಗೆಯೇ ಜ್ಞಾನ ದೇಗುಲದ ನಾಡು ಕೊಡಗು ಎಂದಾಗಬೇಕು ಎಂದು ಅಭಿಪ್ರಾಯಿಸಿದರು. ಐ.ಎನ್.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ ಶಿಕ್ಷಕರಿಗೆ ಸಹನೆ, ಶಿಸ್ತು, ಸಂಯಮ ಬಹಳ ಮುಖ್ಯ ಎಂದು ಹೇಳಿದರು.

ಕೊ.ಜಿ.ವಿದ್ಯಾ ಇಲಾಖೆಯ ನೌಕರರ ಪ.ಸೌ. ಬ್ಯಾಂಕ್‍ನ ಅಧ್ಯಕ್ಷ ಕೆ.ಕೆ.ಮಂಜುನಾಥ್ ಮಾತನಾಡಿ ಹಿಂದೆ ಗುರುಗಳಿಗೆ ಅವರದೆ ಆದ ಮರ್ಯಾದೆ ಇತ್ತು. ಅದರೆ ಇಂದು ಬದಲಾಗಿದೆ. ಶಿಕ್ಷಕ ಸಮೂಹ ಸಂಘಟನೆಯನ್ನು ಒಂದು ಕುಟುಂಬದಂತೆ ನೋಡಿಕೊಳ್ಳಬೇಕು. ನಮಗೆ ಸಮಸ್ಯೆ ಬಂದಾಗ ಅದನ್ನು ನಾವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಕೆ.ಎಂ.ಭವಾನಿ, ಸಂತ ಜೋಸೆಫರ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶೋಭಾ ಡಿಸೋಜ, ಪ.ಪೂ.ಕಾ.ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಸಿ.ಎನ್.ವಿಶ್ವನಾಥ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷÀ ಚೇತನ್, ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕರು ಇತರರು ಇದ್ದರು.