ಸೋಮವಾರಪೇಟೆ,ಡಿ.1: ತಾಲೂಕಿನ ಯಡವನಾಡು ಮೀಸಲು ಅರಣ್ಯದಲ್ಲಿ ಬೇಟೆಯಾಡಲು ತೆರಳಿದ್ದ ಈರ್ವರು ಆರೋಪಿಗಳನ್ನು ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.ಸಮೀಪದ ಕಾರೇಕೊಪ್ಪ ಗ್ರಾಮದ ನಿವಾಸಿ ಹರಿಶ್ಚಂದ್ರ ಹಾಗು ತಲ್ತರೆಶೆಟ್ಟಳ್ಳಿ ಗ್ರಾಮದ ಪ್ರಮೋದ್ ಬಂಧಿತ ಆರೋಪಿಗಳು. ಯಡವನಾಡು ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ, ಬೇಟೆಯಾಡಲು ತಯಾರಿ ನಡೆಸಿದ್ದ ಸಂದರ್ಭ ಬಂದೂಕು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಎಸಿಎಫ್ ಚಿಣ್ಣಪ್ಪ ಮಾರ್ಗದರ್ಶನದಲ್ಲಿ ಆರ್‍ಎಫ್‍ಒ ಲಕ್ಷ್ಮೀಕಾಂತ್, ಡಿಆರ್‍ಎಫ್‍ಒ ಸುರೇಶ್ ಕುಮಾರ್, ಅರಣ್ಯ ರಕ್ಷಕರಾದ ರಾಜು, ಕಿರಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.