ಕುಶಾಲನಗರ, ನ. 24 : ಸಾಕಾನೆಯೊಂದು ಮಾವುತನಿಗೆ ತಿವಿದ ಕಾರಣ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಕುಶಾಲನಗರದ ಆನೆಕಾಡು ಬಳಿ ನಡೆದಿದೆ. ಇಂದು ಮಧ್ಯಾಹ್ನ ವೇಳೆ ಸಮೀಪದ ಹೆರೂರು ಅರಣ್ಯಕ್ಕೆ ಮಯೂರ ಸಾಕಾನೆಯನ್ನು ಕರೆದುಕೊಂಡು ಹೋದ ಸಂದರ್ಭ ಈ ಘಟನೆ ಸಂಭವಿಸಿದೆ.

ಮಾವುತ ಮಣಿ (42) ಎಂಬವರಿಗೆ ಆನೆ ತಿವಿದ ಹಿನ್ನೆಲೆಯಲ್ಲಿ ಸೊಂಟದ ಭಾಗಕ್ಕೆ ತೀವ್ರ ಏಟು ಉಂಟಾಗಿ ರಕ್ತಸ್ರಾವದಿಂದ ಬಳಲುತ್ತಿದ್ದು ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಅರುಣ್ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲು ಆಸ್ಪತ್ರೆಯ ತುರ್ತು ವಾಹನ ಲಭ್ಯವಿಲ್ಲದ ಸಂದರ್ಭ ಸ್ಥಳೀಯ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ದೃಶ್ಯವೂ ಕಂಡುಬಂತು. ಸ್ಥಳೀಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರು ನೀಡುವದಾಗಿ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಎಸ್.ಎನ್.ರಾಜಾರಾವ್ ತಿಳಿಸಿದ್ದಾರೆ.