ಕುಶಾಲನಗರ, ನ. 21: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಇಂದು ಸುಂಟಿಕೊಪ್ಪ ನಾಡು ಗೌಡ ಸಂಘದವರು ಪಾಲ್ಗೊಂಡು ಒತ್ತಾಯಿಸಿದರು.

ಸ್ಥಳೀಯ ಕಾರು ನಿಲ್ದಾಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ನೇತೃತ್ವದಲ್ಲಿ ಧರಣಿ ನಡೆಯಿತು. ರಾಜ್ಯ ಹೆದ್ದಾರಿಯಲ್ಲಿ ಸ್ವಲ್ಪ ಕಾಲ ಮಾನವ ಸರಪಳಿ ರಚಿಸಿದ ಸಂಘದ ಸದಸ್ಯರು ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಜವಾಹರ್, ಕಾರ್ಯದರ್ಶಿ ಯಂಕನ ಕೌಶಿಕ್, ಖಜಾಂಚಿ ಪಟ್ಟೆಮನೆ ಉದಯ, ನಿರ್ದೇಶಕರಾದ ಕುಂಜಿಲನ ಮಂಜುನಾಥ್, ಮಾಗಲು ವಸಂತ ಮತ್ತಿತರರು ಇದ್ದರು.