ಶನಿವಾರಸಂತೆ, ಸೆ. 13: ಗೌಡಳ್ಳಿ ಗ್ರಾಮದ ರಸ್ತೆಯಲ್ಲಿ ರಾತ್ರಿ ಸಂಚರಿಸುತ್ತಿದ್ದಾಗ ಸ್ಕೂಟರ್ (ಕೆ.ಎ. 12 ಕ್ಯು 6470)ವೊಂದಕ್ಕೆ ಗೌಡಳ್ಳಿ ಕಡೆಯಿಂದ ಬರುತ್ತಿದ್ದ ಮಾರುತಿ ಸ್ಪಿಪ್ಟ್ ಕಾರೊಂದು (ಕೆ.ಎ. 12 ಪಿ. 8691) ಚಾಲಕನ ಅಜಾಗರೂಕತೆ ಮತ್ತು ಅತೀ ವೇಗವಾಗಿ ಚಾಲನೆ ಮಾಡಿದ ಪರಿಣಾಮ ಸ್ಕೂಟರ್‍ಗೆ ಡಿಕ್ಕಿಯಾಗಿ ಚಾಲಕ ಹಾಗೂ ಹಿಂಬದಿ ಸವಾರರಿಬ್ಬರು ಗಾಯಗೊಂಡು ಸ್ಕೂಟರ್ ಜಖಂಗೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೂಗೂರು ಗ್ರಾಮದ ಶಶಿಕುಮಾರ್ ಹಾಗೂ ರವಿ ಎಂಬವರು ರಾತ್ರಿ ಸ್ಕೂಟರ್‍ನಲ್ಲಿ ಗೌಡಳ್ಳಿ ಕಡೆಗೆ ಹೋಗುತ್ತಿರುವಾಗ ಗೌಡಳ್ಳಿ ಕಡೆಯಿಂದ ಮಾರುತಿ ಸ್ಪಿಪ್ಟ್ ಕಾರಿನ ಚಾಲಕ ಶಾಂತವೇರಿ ಗ್ರಾಮದ ಮೋಹನ್ ಆಲಿಯಾಸ್ ಮಿಥುನ್ ತಿರುವು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್‍ಗೆ ಡಿಕ್ಕಿ ಪಡಿಸಿ, ಕಾರನ್ನು ನಿಲ್ಲಿಸದೆ ಹೊರಟು ಹೋದ ಎನ್ನಲಾಗಿದೆ. ಸವಾರರಿಬ್ಬರು ಕೆಳಗಡೆ ಬಿದ್ದ ಇಬ್ಬರಿಗೂ ಕಾಲು, ತಲೆ, ಕೈಗೆ ಗಾಯಗಳಾಗಿದ್ದು, ಸ್ಕೂಟರ್ ಪೂರ್ಣ ಜಖಂಗೊಂಡಿರುತ್ತದೆ. ಗಾಯಾಳು ಗಳನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಕಿತ್ಸೆಗಾಗಿ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿದ್ದ ಕೂಗೂರು ಗ್ರಾಮದ ಕೆ.ಎ. ಸೋಮಶೇಖರ್ ಇಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಜಖಂಗೊಂಡ ಸ್ಕೂಟರ್‍ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.