ವೀರಾಜಪೇಟೆ, ಸೆ. 9: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿರುವ ಮಾಧ್ಯಮ ಬಹಳ ಶಕ್ತಿಶಾಲಿಯಾಗಿದೆ ಎಂದು ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಅಜ್ಜಿನಿಕಂಡ ಎಸ್. ಗಣಪತಿ ಹೇಳಿದರು.ಕೊಡಗು ಪ್ರೆಸ್ ಕ್ಲಬ್, ವೀರಾಜಪೇಟೆ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗ ಸಂಯುಕ್ತಾಶ್ರಯದಲ್ಲಿ ಕಾವೇರಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಸರಣಿ ಮಾಧ್ಯಮ ಸಂವಾದ ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ದಾರಿ ತಪ್ಪಿದ್ದಾಗ ಅದನ್ನು ಸರಿಪಡಿಸುವ ಕೆಲಸವನ್ನು ಮಾಧ್ಯಮ ರಂಗ ಮಾಡುತ್ತಿದೆ. ದೇಶದಲ್ಲಿ ನಡೆದ ವಿವಿಧ ಹಗರಣಗಳನ್ನು ಮಾಧ್ಯಮಗಳು ಬಯಲು ಮಾಡಿವೆÉ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಮಾಜದ ಪರಿವರ್ತನೆಯನ್ನು ಮಾಧ್ಯಮ ಮಾಡುತ್ತಿದೆ. ಸರ್ಕಾರದ ಕೆಲಸ ಕಾರ್ಯಗಳನ್ನು ವಾಚ್ ಡಾಗ್ ಆಗಿ ಕಾರ್ಯನಿರ್ವಹಿಸುತ್ತಿದೆ. ಮಾಧ್ಯಮಗಳಲ್ಲಿ ಬರುವ ವಿಷಯ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸ ಪದೇ ಪದೇ ನಡೆಯುತ್ತಿದೆ. ಇದನ್ನು ದಾಟಿ ಮಾಧ್ಯಮಗಳು ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಂವಾದ ಉದ್ಘಾಟಿಸಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮ ರಂಗದÀ ವಿವಿಧ ಮಜಲುಗಳನ್ನು ಪರಿಚಯಿಸುವ ಉದ್ದೇಶದಿಂದ ಸರಣಿ ಸಂವಾದ ಆಯೋಜಿಸಲಾಗಿದೆ. ಅನುಭವಿ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡು ವಿಷಯ ಮಂಡಿಸಲಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ವರದಿ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾವೇರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕುಟ್ಟಂಡ ಜಿ. ಉತ್ತಪ್ಪ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮ ವೃತ್ತಿ ಆಯ್ಕೆ ಮಾಡಿ ಕೊಳ್ಳುವತ್ತ ಗಮನ ಹರಿಸಬೇಕು. ಕೊಡಗು ಪ್ರೆಸ್‍ಕ್ಲಬ್ ಒಳ್ಳೆಯ ಕಾರ್ಯಕ್ರಮ ನಮ್ಮ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವೇರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರೊ. ಸಿ.ಎನ್. ನಾಚಪ್ಪ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಷಯದ ಆಳಕ್ಕೆ ಇಳಿಯಬೇಕು. ಬೇರೆ- ಬೇರೆ ಆಯಾಮದತ್ತ ಗಮನ ಹರಿಸಬೇಕೆಂದು ಕರೆ ನೀಡಿದರು. ಕೊಡಗು ಪ್ರೆಸ್‍ಕ್ಲಬ್ ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್, ಉಪಾಧ್ಯಕ್ಷ ಆರ್. ಸುಬ್ರಮಣಿ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆ ಗಮನದಲ್ಲಿಟ್ಟುಕೊಂಡು ಕ್ಲಬ್‍ನಿಂದ ಸಂವಾದ ಆಯೋಜಿಸಲಾಗಿದೆ. ವಿದ್ಯಾಭ್ಯಾಸದ ವೇಳೆ ಮಾಧ್ಯಮ ರಂಗದ ಅರಿವು ಇದ್ದರೆ ಪತ್ರಿಕೋದ್ಯಮ ವೃತ್ತಿ ಆಯ್ಕೆಗೆ ಸಹಕಾರಿಯಾಗಲಿದೆ ಎಂದರು.

ಪ್ರತಿನಿತ್ಯ ಪತ್ರಿಕೆ ಓದುವದರಿಂದ ಜ್ಞಾನ ಪಡೆಯಬಹುದಾಗಿದೆ. ಸಾಮಾನ್ಯ ಜ್ಞಾನ ಪಡೆಯಲು ಪತ್ರಿಕೆ ಓದಬೇಕು. ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂದು ಬರಹ ಕೌಶಲ್ಯ ವಿಷಯ ಕುರಿತು ವಿಷಯ ಮಂಡಿಸಿದ ವಿಜಯಕರ್ನಾಟಕ ಪ್ರಧಾನ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಹೇಳಿದರು. ಪ್ರಾತ್ಯಕ್ಷಿಕೆ ಮೂಲಕ ಮಾಧ್ಯಮದ ಪರಿಚಯ ಮಾಡಿದರು. ಪತ್ರಿಕೋದ್ಯಮ ವಿಭಾಗ ಉಪನ್ಯಾಸಕರಾದ ಐನಂಡ ಸೋಮಣ್ಣ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಸೀತಮ್ಮ, ದೈಹಿಕ ಶಿಕ್ಷಕಿ ಡಾ. ದೇಚಮ್ಮ, ಕನ್ನಡ ವಿಭಾಗ ಮುಖ್ಯಸ್ಥ ಶಂಕರನಾರಾಯಣ, ಇತಿಹಾಸ ವಿಭಾಗ ಮುಖ್ಯಸ್ಥ ನಾಗರಾಜ್ ಹಾಜರಿದ್ದರು. ಗಗನ್, ಕವಿತಾ ನಿರೂಪಿಸಿ, ದಿವ್ಯಾ ಸ್ವಾಗತಿಸಿ, ನಯನಾ ವಂದಿಸಿದರು.