ಕುಶಾಲನಗರ, ಏ. 19: ರಜಾ ಅವಧಿಯಲ್ಲಿ ಸರಕಾರಿ ಶಾಲೆಗಳ ಮಕ್ಕಳ ಬೌದ್ದಿಕ ಮತ್ತು ಮಾನಸಿಕ ಮಟ್ಟ ಸುಧಾರಿಸಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನದ ಸೋಮವಾರಪೇಟೆ ಘಟಕದ ವತಿಯಿಂದ ಇಲ್ಲಿಗೆ ಸಮೀಪದ ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ‘ಸ್ವಲ್ಪ ಓದು ಸ್ವಲ್ಪ ಮೋಜು’ ಎಂಬು ಶೀರ್ಷಿಕೆಯಡಿ ಪ್ರಾರಂಭವಾದ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಪತ್ರಕರ್ತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಇತ್ತೀಚಿನ ದಿನಗಳಲ್ಲಿ ಅನುದಾನ ಕಡಿಮೆ ಬರುತ್ತಿದ್ದು, ಅದು ಗ್ರಾಮದ ಅಭಿವೃದ್ಧಿಗೆ ಮಾತ್ರ ಬಳಸಲು ಸಾಧ್ಯವಾಗುತ್ತಿದೆ. ಹಾಗಾಗಿ ಶಾಲಾ ಗೋಡೆ ಮತ್ತು ಕಿಟಕಿ ಬಾಗಿಲುಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಸುಣ್ಣ-ಬಣ್ಣವನ್ನು ಬಳಿಸಿ ಕೊಡಬೇಕು ಎಂದು ವೇದಿಕೆಯಲ್ಲಿದ್ದ ಜಿ.ಪಂ. ಸದಸ್ಯೆ ಇವರಲ್ಲಿ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಮ್ಮ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಕವಿತಾ, ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮನ್ವಯಾದಿಕಾರಿ ಮಾಲತಿ, ನಂಜರಾಯಪಟ್ಟಣ ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ, ಶಿಕ್ಷಕ ಹೆಚ್.ಎಂ. ವೆಂಕಟೇಶ್ ಮತ್ತು ಶಾಲಾ ಶಿಕ್ಷಕರ ವೃಂದದ ಚೇತನ್ ಕುಮಾರ್, ಗಂಗಮ್ಮ, ಜಯಲಕ್ಷೀ ಮತ್ತು ಸರೋಜ ಹಾಜರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಎನ್.ಪಿ. ಆಶಾಮಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪಿ.ಪಿ. ಸುರೇಶ್ ವಂದಿಸಿದರು.
ಶಿಬಿರ ಮೇ 28 ರವರೆಗೆ ನಡೆಯಲಿದ್ದು, ಮಕ್ಕಳಿಗೆ ಕುಟುಂಬ, ನೀರು, ಆಹಾರ, ಆರೋಗ್ಯ ನೈರ್ಮಲ್ಯ, ಮತ್ತು ಪರಿಸರ ಎಂಬ ವಿಷಯದಡಿ ಐದು ವಾರ ಬೋಧಿಸಲಾಗುತ್ತದೆ. ಕಡೆಯ ವಾರ ಕಲಿಕಾ ಮುಕ್ತ ದಿನದಲ್ಲಿ ಮಕ್ಕಳಲ್ಲಿ ಅಡಗಿರುವ ಸೃಜನಶೀಲಾ ಪ್ರತಿಭೆಗಳಾದ ಹಾಡು, ಆಟ, ಕಥೆ ಹೇಳುವದು, ಭಾಷಣ, ನೃತ್ಯ, ಚಿತ್ರಕಲೆ, ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.