ಮಡಿಕೇರಿ, ಏ. 19: ಆಧ್ಯಾತ್ಮ ಗುರುಗಳಾದ ‘ಶ್ರೀ ಎಂ’ ಎಂದೇ ಪ್ರಖ್ಯಾತರಾದ ಮಮ್ತಾಜ್ ಅಲಿ ಖಾನ್ ಅವರು ಬರೆದಿರುವ ‘ದಿ ಜರ್ನಿ ಕಂಟಿನ್ಯೂಸ್’ ಆತ್ಮಕಥೆಯ ಎರಡನೇ ಭಾಗ ತಾ. 22ರಂದು ಸಂಜೆ 6.30 ಗಂಟೆಗೆ ಭಾರತೀಯ ವಿದ್ಯಾಭವನದ ಕಿಂಚಾ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

ಸಮಾರಂಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ರಾಜ್ಯಸಭಾ ಸದಸ್ಯ ಪಿ.ಜೆ. ಕುರಿಯನ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಎಂ. ವೆಂಕಟಾಚಲಯ್ಯ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ, ಸ್ವಪ್ನ ಬುಕ್ ಹೌಸ್‍ನ ನಿರ್ದೇಶಕ ದೀಪಕ್ ಷಾ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಸಮಾಜ ಸುಧಾರಣೆ, ಬಡ ಮಕ್ಕಳ ವಿದ್ಯಾಭ್ಯಾಸ, ಆಧ್ಯಾತ್ಮಿಕ ಪ್ರಜ್ಞೆಯ ಜಾಗೃತಿ ಇವೆಲ್ಲದರ ಅಡಿಗಲ್ಲಿನಲ್ಲಿ ಶ್ರೀ ಎಂ. ಅವರು ವಿವಿಧ ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಶ್ರೀ ಎಂ ಅವರು ಮಮ್ತಾಜ್ ಅಲಿ ಖಾನ್ ಎಂಬ ನಾಮಧೇಯದಿಂದ ಮುಸ್ಲಿಂ ಧರ್ಮದಲ್ಲಿ ಜನಿಸಿದರೂ ಅವರ ಪ್ರವಚನಗಳಲ್ಲಿ ಭಗವದ್ಗೀತೆ, ಉಪನಿಷತ್‍ಗಳಲ್ಲದೇ, ಬುದ್ಧನ, ಸೂಫಿ ಸಂತರ, ಏಸುವಿನ ಮತ್ತು ಯಹೂದಿ ಸಂತರ ಸಂದೇಶಗಳು ಸಾಧಕರ ಮನ ತಟ್ಟುತ್ತವೆ. ಸಮಾಜದ ವಿವಿಧ ಧರ್ಮ, ಜಾತಿ, ಪಂಥಗಳನ್ನು ಒಗ್ಗೂಡಿಸುವದೇ ಅವರ ಮಹತ್ತರ ಧ್ಯೇಯ. ಈ ಸಂದೇಶವನ್ನು ಪ್ರವಚನಗಳ ಮೂಲಕ ಮಾತ್ರವಲ್ಲದೇ ನಿರ್ದಿಷ್ಟ ರೂಪವಾಗಿ ಕಾರ್ಯರೂಪಕ್ಕೆ ತರಲೆಂದೇ ತಮ್ಮ 66ನೇ ವಯಸ್ಸಿನಲ್ಲಿ ಭಾರತದಾದ್ಯಂತ 7500 ಕಿ.ಮೀ. ಪಾದಯಾತ್ರೆಯನ್ನು ಕೈಗೊಂಡರು.

ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಸಂದೇಶವನ್ನು ಮತ್ತು ಅನಿವಾರ್ಯತೆಯನ್ನು ಭಾರತದ ಹಳ್ಳಿ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಜಾತಿ, ಮತ, ಧರ್ಮಗಳ ಬೇಧವೆಣಿಸದೇ ಸಮಾಜದ ಎಲ್ಲಾ ವರ್ಗಗಳಿಗೂ ಸಾರಿದರು. ಭಾರತದ ಆಧುನಿಕ ಇತಿಹಾಸದಲ್ಲಿ ಇದೊಂದು ಮಹತ್ತರÀ ಮತ್ತು ಅಪರೂಪದÀ ಸಾಧನೆ. ಸತ್ಸಂಗ ಫೌಂಡೇಷನ್ ಮೂಲಕ ಶ್ರೀ ಎಂ ಅವರು ಬಡ ಮಕ್ಕಳಿಗೆ ಶಾಲೆ ಮತ್ತು ಸ್ವಾಸ್ಥ್ಯ ಕೇಂದ್ರದ ಮೂಲಕ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ. ಮೈತ್ರಿ ಎಂಬ ಸಂಘಟನೆಯ ಅಡಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರÀ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.