ಸೋಮವಾರಪೇಟೆ, ಏ. 18: ಸೋಮವಾರಪೇಟೆ ಪಟ್ಟಣವನ್ನು ಸ್ವಚ್ಛ ನಗರವನ್ನಾಗಿಸುವದು ಪ್ರತಿಯೊಬ್ಬರ ಕರ್ತವ್ಯವಾಗಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಮಾಡಲು ಪ್ರತಿ ಮನೆಗಳಿಗೆ ನೀಡಲು ಉದ್ದೇಶಿಸಿರುವ ಕಸ ಸಂಗ್ರಹಣ ಡಬ್ಬಿಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಇಂದು ಎಲ್ಲೆಲ್ಲೂ ಕಸ ವಿಲೇವಾರಿ ಕಗ್ಗಂಟಾಗಿ ಪರಿಣಮಿಸಿದ್ದು, ಇದರ ಪರಿಹಾರಕ್ಕಾಗಿ ದಾರಿ ಹುಡುಕಬೇಕಾಗಿದೆ ಎಂದು ಹೇಳಿದರು. ಕಸ ವಿಲೇವಾರಿ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯಗಳಿವೆ. ಇಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸರಕಾರ ಕೋಟ್ಯಾಂತರ ರೂ. ಅನುದಾನ ಒದಗಿಸುತ್ತಿದೆ. ಕಸವನ್ನು ಹಸಿಕಸ ಹಾಗೂ ಒಣಗಿದ ಕಸವನ್ನಾಗಿ ವಿಂಗಡಿಸಿ ಪಂಚಾಯಿತಿಯ ವಾಹನ ಬಂದಾಗ ನೀಡಬೇಕು. ಈ ಕಸದಿಂದ ಸಾವಯವ ಗೊಬ್ಬರವನ್ನು ತಯಾರಿಸಲಾಗುತ್ತದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಯಾರೇ ಆಗಲಿ ವಿರೋಧಿಸುವದು ಸರಿಯಲ್ಲವೆಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ ಪಟ್ಟಣದಲ್ಲಿ ಕಸ ವಿಲೇವಾರಿ ಬೃಹತ್ ಸಮಸ್ಯೆಯಾಗಿದೆ. ವಿಲೇವಾರಿ ಮಾಡಲು ಸೂಕ್ತ ಸ್ಥಳವಿಲ್ಲದೆ ಪರದಾಡುವಂತಾಗಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ ಜನತೆ ಎಲ್ಲೆಂದರಲ್ಲಿ ಕಸ ಎಸೆಯದೆ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯರುಗಳಾದ ಲೀಲಾ ನಿರ್ವಾಣಿ, ಬಿ.ಎಂ. ಸುರೇಶ್, ಸುಷ್ಮ, ಮೀನಾ ಕುಮಾರಿ, ಆದಂ, ಇಂದ್ರೇಶ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ವೀರೇಂದ್ರ, ನಗರ ಬಿಜೆಪಿ ಅಧ್ಯಕ್ಷ ಸೋಮೇಶ್ ಸೇರಿದಂತೆ ಇತರರು ಹಾಜರಿದ್ದರು.