ಮಡಿಕೇರಿ, ಏ. 19: ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಅಭಿಪ್ರಾಯ ಕ್ರೋಢೀಕರಿಸಲು ವಿಶೇಷ ಗ್ರಾಮಸಭೆಗಳು ನಡೆಯುತ್ತಿದ್ದು, ಬಹುತೇಕ ಪಂಚಾಯಿತಿಗಳಲ್ಲಿ ವರದಿ ಜಾರಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಡುವೆ ಕಡಗದಾಳು ಗ್ರಾಮ ಪಂಚಾಯಿತಿಯಲ್ಲಿ ವರದಿ ಜಾರಿಗೆ ಸಹಮತ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿರುವದು ವಿಶೇಷವಾಗಿದೆ.
ಆರಂಭದಲ್ಲಿ ವರದಿಯ ಬಗ್ಗೆ ಸ್ಥಳೀಯರಲ್ಲಿ ಗೊಂದಲವಿತ್ತು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಅವರು ವರದಿಯ ಮಾಹಿತಿಯ ಬಗ್ಗೆ ಗ್ರಾಮಸ್ಥರಿಗೆ ವಿವರ ನೀಡಿ ಈ ವರದಿ ಜಾರಿಯಾದಲ್ಲಿ ರೈತರಿಗೆ ಯಾವದೇ ತೊಂದರೆಯಾಗದು. ಇಲ್ಲಿನ ಜನಜೀವನ ಎಂದಿನಂತಿರುತ್ತದೆ. ಆದರೆ ರೈತರಿಗೆ ವನ್ಯ ಪ್ರಾಣಿಗಳ ಹಾವಳಿ ತಡೆ, ಸೂಕ್ತ ಬೆಳೆಹಾನಿ ಪರಿಹಾರ ಇತ್ಯಾದಿ ನೀಡಬೇಕಿದೆ ಎಂದು ಹೇಳಿದರು.
ಕೊಡಗಿಗೆ ಮಾರಕವಾದ ಯಾವದೇ ಯೋಜನೆ ಅನುಷ್ಠಾನಕ್ಕೆ ಅವಕಾಶವಿರುವದಿಲ್ಲ. ವರದಿಯ ವಿರೋಧ ವ್ಯಕ್ತಪಡಿಸುವವರು ಜನರಿಗೆ ತಪ್ಪು ಮಾಹಿತಿಗಳನ್ನು ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಜನತೆಗೆ ಸಾಧಕ-ಬಾಧಕದ ಬಗ್ಗೆ ಸತ್ಯಾಸತ್ಯತೆ ತಿಳಿದಲ್ಲಿ ಯಾರೂ ಕೂಡ ಇದಕ್ಕೆ ವಿರೋಧಿಸುವದಿಲ್ಲ. ಮಾಹಿತಿ ಕೊರತೆಯಿಂದ ಹಾಗೂ ತಪ್ಪು ಗ್ರಹಿಕೆಯಿಂದ ಹಳಿ ತಪ್ಪುತ್ತಿದ್ದಾರೆ ಎಂದರು. ಕೊಡಗು ನೈಜ ಕೊಡಗಾಗಿ ಉಳಿಯ ಬೇಕಾದ್ದಲ್ಲಿ ವರದಿ ಜಾರಿಗೆ ಬರಬೇಕು. ಹಾಗಾದಲ್ಲಿ ಟಿಂಬರ್ ಮಾಫಿಯಾ, ಚತುಷ್ಪಥ ರಸ್ತೆ ಕಾಮಗಾರಿ, ಮರಗಳ ಮಾರಣ ಹೋಮ, ನಡೆಸಿದ ಹೈಟೆನ್ಷನ್ ವಿದ್ಯುತ್ ಮಾರ್ಗ, ನದಿ ತಿರುವು ಯೋಜನೆಗಳಂತದ್ದಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದರು.
ಕೊಡಗನ್ನು ಸಂರಕ್ಷಿಸಲು ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬರಬೇಕೆಂದು ಒಕ್ಕೊರಲಿನ ನಿರ್ಣಯಕ್ಕೆ ಬರಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಸರಸ್ವತಿ, ರವಿಕುಮಾರ್, ಶಾಂತಿ, ರಮೇಶ್ ರೈ, ಪೊನ್ನಚೆಟ್ಟಿರ ರಮೇಶ್, ರಮೇಶ್ ಆಚಾರ್ಯ, ಓಮನ, ಪುಷ್ಪಾವತಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬೊಳಿಯಾಡಿರ ಚಂಗಪ್ಪ, ಕಾರ್ಯದರ್ಶಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.