ಮಡಿಕೇರಿ ಏ. 18 : ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಐವರು ಚೋರರನ್ನು ಬಂಧಿಸಿದ್ದು, 12 ಕಳವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ನಿನ್ನೆ ದಿನ ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ ಜಾತ್ರಾ ಮೈದಾನದಲ್ಲಿ ಆಟೋವೊಂದರಲ್ಲಿ ಮಾರಕಾಯುಧಗಳನ್ನು ಒಳಗೊಂಡು ದರೋಡೆಗೆ ಸಂಚು ರೂಪಿಸುತ್ತಿದ್ದ ವೇಳೆ ಮಾಹಿತಿ ಪಡೆದ ಕುಶಾಲನಗರ ಪೊಲೀಸರು ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಇಂದು ತಮ್ಮ ಕಚೇರಿಯನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಸೋಮವಾರಪೇಟೆ ಗಾಂಧಿನಗರದ ಸಂಜಯ್ ಕುಮಾರ್ ಅಲಿಯಾಸ್ ಸಂಜಯ್, ಇಸ್ಮಾಯಿಲ್, ಚೌಡ್ಲು ಗ್ರಾಮದ ಪಿ.ಕೆ. ರವಿ., ಸಿ.ಎಸ್. ಸುದೇವ, ಹಾನಗಲ್ಲು ಗ್ರಾಮದ ಎನ್.ಸಿ. ಚಂದ್ರ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಮುಖ ಆರೋಪಿ ಸಂಜಯ್ ವಿರುದ್ಧ ಕುಶಾಲನಗರ ನ್ಯಾಯಾಲಯದ 2 ಪ್ರಕರಣಗಳಲ್ಲಿ, ಸೋಮವಾರಪೇಟೆ ನ್ಯಾಯಾಲಯದ 5 ಪ್ರಕರಣಗಳಲ್ಲಿ ಚೆನ್ನರಾಯಪಟ್ಟಣ ಹಾಗೂ ಅರಕಲಗೋಡು ನ್ಯಾಯಾಲಯಗಳಲ್ಲಿ ತಲಾ
(ಮೊದಲ ಪುಟದಿಂದ) ಒಂದೊಂದು ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಲ್ಲಿ ಬಂಧನ ವಾರೆಂಟ್ ಜಾರಿಯಾಗಿದ್ದು, ಈತ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ವ್ಯಕ್ತಿ ಮತ್ತೊಬ್ಬ ಆರೋಪಿ ಕಳವು ಪ್ರಕರಣವೊಂದರಲ್ಲಿ 2010ರಲ್ಲಿ ಸಜೆ ಆಗಿತ್ತು.
ಬಂಧಿತ ಆರೋಪಿಗಳಿಂದ ಆಟೋ (ಕೆ.ಎ. 12-ಎ-4940)ದಲ್ಲಿದ್ದ 2 ಲಾಂಗ್, ದೊಣ್ಣೆ, ಮೆಣಸಿನ ಪುಡಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಡೆದಿದ್ದ ಬಜೆಗುಂಡಿ ಅಯ್ಯಪ್ಪ ದೇವಾಲಯ ಹುಂಡಿ ಕಳವು (ರೂ. 4700), ಗೌಡ ಸಮಾಜ ರಸ್ತೆಯಿಂದ ಕೆ.ಎ.43-ಹೆಚ್ 7265 ಸ್ಪ್ಲೆಂಡರ್ ಬೈಕ್ ಕಳವು, ನೇರ್ಗಳ್ಳಿ, ಕರ್ಕಳ್ಳಿ, ಕನ್ನಂಬಾಡಿಯಮ್ಮ ದೇವಾಲಯ ಹುಂಡಿ ಕಳವು (ರೂ. 10,600), ಅಬ್ಬೂರುಕಟ್ಟೆಯ ಹಿತ್ಲು ಮಕ್ಕಿಯಲ್ಲಿ ರೂ. 2000 ಹಣ ಕಳವು, ಜನತಾ ಕಾಲೋನಿಯಿಂದ ಕೆ.ಎ. 12-ಜೆ1512 ಸ್ಪ್ಲೆಂಡರ್ ಬೈಕ್, ಹಾನಗಲ್ಲು ಗ್ರಾಮದಲ್ಲಿ ರೂ. 15 ಸಾವಿರ ನಗದು, ಮೈಸೂರು ವಿಜಯನಗರ ಹೂಟಗಳ್ಳಿಯಲ್ಲಿ ಕೆಎ-9-ಇಆರ್ 3888 ಬೈಕ್ ಕಳವು, ಮಡಿಕೇರಿ ಮಂಗಳಾದೇವಿನಗರದ ಮನೆಯೊಂದರಿಂದ ಚಿನ್ನಾಭರಣ ಕಳವು, ಸೋಮವಾರಪೇಟೆ ಅಬ್ಬೂರುಕಟ್ಟೆಯಲ್ಲಿ ಚಿನ್ನಾಭರಣ ಕಳವು, ಮಾದಾಪುರ ಗಣಪತಿ ದೇವಸ್ಥಾನ ಹುಂಡಿ ಕಳವು (ರೂ.4,300) ಹಾನಗಲ್ಲುವಿನಲ್ಲಿ 215 ಕೆ.ಜಿ. ಕರಿಮೆಣಸು ಕಳವು, ಆಲೆಕಟ್ಟೆ ರೆಸ್ತೆಯಲ್ಲಿನ ಮನೆಯೊಂದರಿಂದ ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಈ ಐವರು ಆರೋಪಿಗಳು ಭಾಗಿಯಾಗಿರುವದು ಬೆಳಕಿಗೆ ಬಂದಿದೆ.
ಬಂಧಿತರಿಂದ 6 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ, 6 ಸಾವಿರ ಮೌಲ್ಯದ 150 ಗ್ರಾಂ ಬೆಳ್ಳಿ ಆಭರಣ, 1.50 ಲಕ್ಷ ಮೌಲ್ಯದ 3 ಬೈಕ್, 1.25 ಲಕ್ಷ ಮೌಲ್ಯದ 225 ಕೆ.ಜಿ. ಕರಿಮೆಣಸು ಸೇರಿದಂತೆ 8,81,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್ಪಿ ಸಂಪತ್ಕುಮಾರ್ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ ಕುಶಾಲನಗರ ನಗರ ಠಾಣಾಧಿಕಾರಿ ಜಗದೀಶ್, ವಿಶೇಷ ಅಪರಾಧ ಪತ್ತೆದಳದ ಎಎಸ್ಐ ಗೋಪಾಲ್, ಸಿಬ್ಬಂದಿಗಳಾದ ಸಜಿ, ಸುಧೀರ್ಕುಮಾರ್, ಸುರೇಶ್, ಮುಸ್ತಾಫ, ಉದಯಕುಮಾರ್, ಸಂಪತ್ ರೈ, ಅಜಿತ್, ಲೋಕೇಶ್, ಚಾಲಕರಾದ ಪ್ರವೀಣ್, ಗಣೇಶ್, ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ತಂಡಕ್ಕೆ ರೂ. 10 ಸಾವಿರ ನಗದು ಬಹುಮಾನ ಘೋಷಿಸಿರುವದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು.