ಸೋಮವಾರಪೇಟೆ, ಏ. 18: ತಾಲೂಕಿನ ಬೀಟಿಕಟ್ಟೆ-ಹಾರಳ್ಳಿ ಗ್ರಾಮದಲ್ಲಿನ ಡಾ. ಅಂಬೇಡ್ಕರ್ ಯುವಕ ಸಂಘವು ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಹಾರಳ್ಳಿ ಗ್ರಾಮದ ಕೆರೆ ಮೈದಾನದಲ್ಲಿ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಆಯೋಜಿಸ ಲಾಗಿದ್ದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರಾದಿಯಾಗಿ ಸಾರ್ವಜನಿಕರು ಭಾಗವಹಿಸಿದ್ದರು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಪುರುಷರು, ಗುರಿ ತಪ್ಪಿ ನಡೆದು, ಪ್ರೇಕ್ಷಕರಿಗೆ ಪುಕ್ಕಟೆ ಮನರಂಜನೆ ನೀಡಿದರು. ಯುವಕರು ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ತಮ್ಮ ಕ್ರೀಡಾಪ್ರತಿಭೆಯನ್ನು ತೋರ್ಪಡಿಸಿದರು.
ಹಗ್ಗಜಗ್ಗಾಟದಲ್ಲಿ ಮಹಿಳೆಯರ ಕುಸುಮಾ ತಂಡ ಪ್ರಥಮ ಸ್ಥಾನ ಪಡೆದರೆ, ಯಶೋಧ ತಂಡ ದ್ವಿತೀಯ ಸ್ಥಾನಗಳಿಸಿತು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಬಿ.ಎಂ. ದಯಾನಂದ ಪ್ರಥಮ, ಬಿ.ಎಂ. ರಾಜು ದ್ವಿತೀಯ ಸ್ಥಾನಗಳಿಸಿದರು. ವಾಲಿಬಾಲ್ ಪಂದ್ಯಾಟದಲ್ಲಿ ಗಣೇಶ್ ತಂಡ ಪ್ರಥಮ. ದಿನೇಶ್ ತಂಡ ದ್ವಿತೀಯ ಸ್ಥಾನಗಳಿಸಿತು.
ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ಡಾ. ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷ ಟಿ.ಆರ್. ರಾಮಚಂದ್ರ, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಬಹುಮಾನ ವಿತರಿಸಿದರು.