ಸಿದ್ದಾಪುರ, ಕುಶಾಲನಗರ, ಏ.17: ಸಾಕಾನೆಯೊಂದು ಈರ್ವರ ಮೇಲೆ ಧಾಳಿ ನಡೆಸಿದ ಪರಿಣಾಮ ಮಾವುತ ಓರ್ವ ಮೃತಪಟ್ಟ ಘಟನೆ ಸಮೀಪದ ದುಬಾರೆಯಲ್ಲಿ ನಡೆದಿದೆ.ದುಬಾರೆಯ ಸಾಕಾನೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಣ್ಣು (48) ಎಂಬವರು ರಂಜನ್ ಎಂಬ ಸಾಕಾನೆಯನ್ನು ನಿರ್ವಹಣೆ ಮಾಡುತ್ತಿದ್ದರು, ಸೋಮವಾರ ಬೆಳಗ್ಗೆ 8 ಗಂಟೆಗೆ ಸಾಕಾನೆಯನ್ನು ಕಟ್ಟಿದ ಜಾಗದಿಂದ ಬಿಚ್ಚುತ್ತಿರುವ ಸಂದರ್ಭ ಸಮೀಪದಲ್ಲೇ ಇದ್ದ 8 ವರ್ಷ ಪ್ರಾಯದ ಕಾರ್ತಿಕ್ ಎಂಬ ಸಾಕಾನೆಯು ಅಣ್ಣುವಿನ ಹಿಂಬದಿಯಿಂದ ಧಾಳಿ ನಡೆಸಿದೆ. ದಂತದಿಂದ ಸೊಂಟದ ಭಾಗಕ್ಕೆ ತಿವಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಅಣ್ಣುವನ್ನು ಸಿದ್ದಾಪುರ ಸಮುದಾಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಸಾವನ್ನಪ್ಪಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತ ಅಣ್ಣುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡಿ.ಎಫ್. ಓ ಸೂರ್ಯಸೇನ್ ಮಾತನಾಡಿ, ಮೃತ ಅಣ್ಣು ಅರಣ್ಯ ಇಲಾಖೆಯ ಸಿಬ್ಬಂದಿಯಾಗಿದ್ದು, ಆತನ ಕುಟುಂಬಕ್ಕೆ ಸರಕಾರದಿಂದ ಸಿಗುವ ಪರಿಹಾರವನ್ನು ನೀಡಲಾಗುವದು ಎಂದು ತಿಳಿಸಿದರು. ಸ್ಥಳಕ್ಕೆ ಆರ್.ಎಫ್.ಓ ನೆಹರು, ಉಪ ವಲಯ ಅರಣ್ಯಾಧಿಕಾರಿ ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಮೃತ ಅಣ್ಣು ಪತ್ನಿ ಹಾಗೂ ಇಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.
(ಮೊದಲ ಪುಟದಿಂದ) ಇದೇ ಸಂದರ್ಭದಲ್ಲಿ ದುಬಾರೆಯ ಕಾರ್ಮಿಕ ಚಂದ್ರ (28) ಎಂಬಾತನ ಮೇಲೆ ಕೂಡ ಕಾರ್ತಿಕ್ ಎಂಬ ಸಾಕಾನೆ ಧಾಳಿ ನಡೆಸಿದ್ದು, ಆತನ ಕಾಲು ಹಾಗೂ ದೇಹಕ್ಕೆ ಗಂಭೀರ ಗಾಯಗೊಂಡಿದ್ದು, ಗಾಯಾಳು ಚಂದ್ರುವಿಗೆ ಸಿದ್ದಾಪುರ ಸಮುದಾಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
(ವರದಿ : ಎ.ಎನ್. ವಾಸು, ಚಂದ್ರಮೋಹನ್)