ಮಡಿಕೇರಿ, ಜ. 27: ಸರಕಾರ ಛಾಯಾಗ್ರಾಹಕರನ್ನು ಕಡೆಗಣಿಸು ತ್ತಿರುವದರಿಂದ ಛಾಯಾಗ್ರಾಹಕರು ಇಂದು ಬೀದಿಗೆ ಬಿದ್ದಿದ್ದಾರೆ ಎಂದು ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷ ಹೆಚ್.ಎಸ್ ನಾಗೇಶ್ ಅಸಮಾಧಾನ ವ್ಯಕ್ತ ಪಡಿಸಿದರು. ಗೌಡ ಸಮಾಜದಲ್ಲಿ ಜಿಲ್ಲಾ ಛಾಯಾಗ್ರಾಹಕರರ ಸಂಘದ ವತಿಯಿಂದ ನಡೆದ ಛಾಯಾಗ್ರಾಹಕರ ಛಾಯಾ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಘದ ದಿನಚರಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸರಕಾರ ತಮ್ಮ ಕಚೇರಿಗಳಲ್ಲಿ ವೆಬ್ ಕ್ಯಾಮರ ಅಳವಡಿಸಿಕೊಂಡಿದೆ. ಅಲ್ಲದೇ ಪ್ರತಿ ಸರಕಾರಿ ಕಾರ್ಯಕ್ರಮಗಳಿಗೂ ಅವರದೇ ಆದ ಛಾಯಾಗ್ರಾಹಕರನ್ನು ಗೊತ್ತು ಮಾಡಿಕೊಳ್ಳುವದರ ಮೂಲಕ ಛಾಯಾಗ್ರಾಹಕರನ್ನು ಕಡೆಗಣಿಸುತ್ತಿದೆ ಎಂದು ಹೇಳಿದರು.
ಡಿಜಿಟಲೀಕರಣದಿಂದ ಕೂಡ ಇಂದು ಛಾಯಾಚಿತ್ರ ಗ್ರಾಹಕರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಮೊಬೈಲ್ ಇಂದು ಛಾಯಾಚಿತ್ರಗ್ರಾಹಕರ ಜೀವನಕ್ಕೆ ಕುತ್ತು ತಂದಿದೆ ಎಂದು ಅಭಿಪ್ರಾಯ ಪಟ್ಟರು.
ವ್ಯವಸ್ಥೆಯ ಸರಳೀಕರಣದಿಂದ ಹಲವು ಛಾಯಾಗ್ರಾಹಕರು ತಮ್ಮ ಸ್ಟುಡಿಯೋಗಳನ್ನು ಮುಚ್ಚಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಸರಕಾರ ಕೂಡ ತಮ್ಮ ಬೇಡಿಕೆಗಳತ್ತ ಗಮನ ಹರಿಸುತ್ತಿಲ್ಲ. ನಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.
ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಿ ಹೋರಾಡಬೇಕಿದೆ. ಸಂಘಟಿತರಾದರೆ ಮಾತ್ರ ನಮ್ಮ ವೃತ್ತಿ ಉಳಿಯಲು ಸಾಧ್ಯ. ಸಂಘಟನೆ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಯತ್ನಿಸೋಣವೆಂದರು.
ವಲಯ ಕಾರ್ಯದರ್ಶಿ ರೊಬೆಲ್ ಮಾತನಾಡಿ, ರಾಜ್ಯ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸಂಘದೊಂದಿಗೆ ಜಿಲ್ಲೆ ಹಾಗೂ ತಾಲೂಕು ಸಂಘಗಳು ಕೈ ಜೋಡಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಕಳೆದ ಬಾರಿ ಒಮ್ಮೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒಮ್ಮೆ ಪ್ರತಿಭಟನೆ ನಡೆಸಿದ್ದೆವು. ಆದರೆ ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಮೂರು ತಾಲೂಕಿನ ಹಿರಿಯ ಛಾಯಾಚಿತ್ರ ಗ್ರಾಹಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಶ್ವಕುಮಾರ್ ಗುಡ್ಡೆಮನೆ ವಹಿಸಿದ್ದರು. ಸಂಘದ ಖಜಾಂಚಿ ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಂಜಿನ ನಗರಿ ಛಾಯಾ ಗ್ರಾಹಕರ ಸಂಘದ ಅಧ್ಯಕ್ಷ ಲೂಯಿಸ್, ವೀರಾಜಪೇಟೆ ಛಾಯಾ ಗ್ರಾಹಕರ ಸಂಘದ ಅಧ್ಯಕ್ಷ ಶಿವಕುಮಾರ್ ಟಿ, ಸೋಮವಾರಪೇಟೆ ಪುಷ್ಪಗಿರಿ ಛಾಯಾಚಿತ್ರಗಾಹಕರ ಸಂಘದ ಅಧ್ಯಕ್ಷ ಸುಬ್ರಮಣಿ, ಶನಿವಾರಸಂತೆ ಇಮೇಜ್ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲಿಂಗರಾಜು ಗೌಡ ಎಸ್.ಡಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಜನರಲ್ ತಿಮ್ಮಯ್ಯ ವೃತ್ತದಿಂದ ಗೌಡ ಸಮಾಜದವರೆಗೆ ಮೆರವಣಿಗೆ ನಡೆಸಲಾಯಿತು.
ಉಪಾಧ್ಯಕ್ಷ ಸುರೇಶ್ ಪ್ರಾರ್ಥಿಸಿ, ಶ್ರೀನಿವಾಸ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವರದಿ ವಾಚಿಸಿದರು. ಸುನಿಲ್ ಕಾರ್ಯಕ್ರಮ ನಿರೂಪಿಸಿದರು.