ಸೋಮವಾರಪೇಟೆ, ನ. 15: ಶ್ರೀಗಂಧದ ಮರವನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಖದೀಮರ ಕೃತ್ಯವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, 8 ಮಂದಿ ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ ವಾಹನ ಸೇರಿದಂತೆ 43 ಕೆ.ಜಿ. ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆಗೆ ಖಚಿತ ವರ್ತಮಾನದ ಮೇರೆ ಕಾರ್ಯಾಚರಣೆ ನಡೆಸಿದ ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು, ಮಾರುತಿ ಓಮ್ನಿ ಕಾರಿನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಕರ್ಕಳ್ಳಿ ಕಡೆಯಿಂದ ನಗರಕ್ಕೆ ಸಾಗಿಸುತ್ತಿದ್ದ ಸಂದರ್ಭ ಇಲ್ಲಿನ ಅಂಬೇಡ್ಕರ್ ಪ್ರತಿಮೆಯ ಬಳಿ ತಡೆದಿದ್ದಾರೆ. ಒಳಗೆ ಪರಿಶೀಲಿಸಿದ ಸಂದರ್ಭ 8 ಮಂದಿ ಆರೋಪಿಗಳ ಸಹಿತ 43 ಕೆ.ಜಿ.ಯಷ್ಟು ಶ್ರೀಗಂಧ ಪತ್ತೆಯಾಗಿದೆ.

ಕಾರಿನ ಒಳಗಿದ್ದ ಆರೋಪಿಗಳಾದ ಕುಸುಬೂರು ಗ್ರಾಮದ ಜಿ.ಎಂ. ಸತೀಶ್ ಕುಮಾರ್, ಕೆಂಚಮ್ಮನ ಬಾಣೆಯ ಎಂ.ಕೆ. ಅರುಣ್ ಕುಮಾರ್, ಕೆ.ಎಂ. ಮಹೇಶ್, ಕೆ.ಆರ್. ಪೂಣೇಶ್, ಕರ್ಕಳ್ಳಿ ಬಾಣೆಯ ಪಿ.ಎಸ್. ಶಶಿಕುಮಾರ್, ಬಿ.ಎಲ್. ಸುರೇಶ್, ಎಂ.ವೈ. ಜೀವನ್, ಕುಸಬೂರು ಗ್ರಾಮದ ಟಿ.ಎನ್. ಉಮೇಶ್ ಅವರುಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 379 ಐಪಿಸಿ ಮತ್ತು ಕಲಂ 86,87 ಕೆಎಫ್ ಆಕ್ಟ್ ರೀತ್ಯಾ ಮೊಕದ್ದಮೆ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿಗಳಾದ ಜಗದೀಶ್, ಶಿವಕುಮಾರ್, ಪ್ರವೀಣ್, ಮಹೇಂದ್ರ ಅವರುಗಳು ಭಾಗವಹಿಸಿದ್ದರು.