ಮಡಿಕೇರಿ, ಜೂ. 18: ಹಾಡಿಗಳಲ್ಲಿ ವಾಸಿಸುವ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸುವದರ ಜೊತೆಗೆ ಅಲ್ಲಿನ ಯುವ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳು ವಂತಾಗಲು ವೃತ್ತಿ ನೈಪುಣ್ಯ ತರಬೇತಿಗೆ ಹೆಚ್ಚಿನ ಒತ್ತು ನೀಡುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡದ ಯರವ ಮತ್ತು ಸೋಲಿಗ ಜನಾಂಗ ದವರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ತಲಪಿಸುವದು ಒಂದು ಕಡೆಯಾದರೆ, ಈ ಸಮುದಾಯದ ಯುವಜನರು ಸ್ವಾವಲಂಬಿ ಬದುಕು ನಡೆಸು ವಂತಾಗಲು ಕಾರ್ಯಕ್ರಮಗಳನ್ನು ರೂಪಿಸುವದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಕಂಪ್ಯೂಟರ್, ಹೊಲಿಗೆ, ವಾಹನ ಚಾಲನಾ ಮತ್ತಿತರ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವಂತಾಗಬೇಕು. ಇದರಿಂದ ಸ್ವಾವಲಂಬಿ ಬದುಕಿಗೆ ಸಹಕಾರಿ ಯಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.

ಪರಿಶಿಷ್ಟ ಪಂಗಡದ ಯರವ ಮತ್ತು ಸೋಲಿಗ ಜನಾಂಗದವರಿಗೆ 2013 ಮತ್ತು 14ನೇ ಸಾಲಿನಲ್ಲಿ ಮೂಲಭೂತ ಸೌಲಭ್ಯದಡಿ ನಿರ್ಮಾಣ ಹಂತದಲ್ಲಿರುವ ವಸತಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಇದಕ್ಕೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಸತೀಶ್ ಅವರು 129 ಮನೆಗಳ ನಿರ್ಮಾಣಕ್ಕೆ ಮುಂದಾಗ ಲಾಗಿದ್ದು, ಇದರಲ್ಲಿ 18 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ವಸತಿ ಯೋಜನೆಗಳನ್ನು ಮೂರು ತಿಂಗಳಲ್ಲಿ ಪೂರ್ಣ ಗೊಳಿಸಲಾಗುವದು ಎಂದರು. ಸಮಿತಿ ಸದಸ್ಯರು ಹಾಗೂ ಸೋಮವಾರಪೇಟೆ ತಾಲೂಕಿನ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರು ಮೂಲ ನಿವಾಸಿ ಗಿರಿಜನರು ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿ ಕೊಳ್ಳುವದು ಕಷ್ಟಸಾಧ್ಯವಾಗಿದೆ. ಪ್ರತಿನಿತ್ಯ ಕೂಲಿ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಆದ್ದರಿಂದ ಲ್ಯಾಂಪ್ ಸೊಸೈಟಿಗೆ ಅನುದಾನ ಬಿಡುಗಡೆ ಮಾಡಿದಲ್ಲಿ ಮನೆ ನಿರ್ಮಿಸಿಕೊಡಲಾಗುವದು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಹಾಡಿಗಳಲ್ಲಿ ವಾಸಿಸುವ ಗಿರಿಜನ ಕುಟುಂಬಗಳಿಗೆ ಮನೆ ನಿರ್ಮಾಣ ಸಂಬಂಧ ಸೋಮವಾರಪೇಟೆ ತಾಲೂಕಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಅವರು ಕೋರಿದರು.

ಸಮಿತಿಯ ಮತ್ತೊಬ್ಬ ಸದಸ್ಯ ಕುಮಾರ್ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಕುಡಿಯ ಜನಾಂಗ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುಡಿಯ ಮತ್ತು ಮಲೆಕುಡಿಯ ಹೆಸರಿನ ಗೊಂದಲದಿಂದ ಕುಡಿಯ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ತಲಪುತ್ತಿಲ್ಲ ಎಂದು ಹೇಳಿದರು. ವನ್ಯಜೀವಿ ಪ್ರದೇಶದಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ಅನುಮೋದನೆ ದೊರೆತಲ್ಲಿ ಮೂಲ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಅವರು ತಿಳಿಸಿದರು. ಸಿಕ್‍ಲ್ ಸೆಲ್ ಅನಿಮೀಯ ಎಂಬ ರಕ್ತ ಹೀನತೆಯಿಂದ ಬಳಲುತ್ತಿರುವ ಜೇನು ಕುರುಬ, ಯರವ, ಸೋಲಿಗ, ಕಾಡು ಕುರುಬ ಜನಾಂಗದವರ ಸಮಗ್ರ ಪಾಲನೆಗೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯ ಹಾಡಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವದು, ಸಂಚಾರಿ ಗಿರಿಜನ ಆರೋಗ್ಯ ಘಟಕ ಮೂಲಕ ಹಾಡಿಗಳಿಗೆ ತೆರಳಿ ಚಿಕಿತ್ಸೆ ನೀಡುವದು, ಶಿಕ್ಷಣ ಮಾರ್ಗದರ್ಶನ ನೀಡುವದು, ಮತ್ತಿತರ ವಿಚಾರದ ಬಗ್ಗೆ ಸಮಾಲೋಚನೆ ನಡೆಯಿತು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಹಾಡಿಗಳ ಮನೆಗಳಿಗೆ ರಕ್ತ ಹೀನತೆ ಸಂಬಂಧ ಮಾಹಿತಿ ಸಂಗ್ರಹಿಸುವಂತೆ ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಅವರು ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಹಲವು ಸಲಹೆ ನೀಡಿದರು. ವೀರಾಜಪೇಟೆ ತಾಲೂಕು ಲ್ಯಾಂಪ್ ಸಂಸ್ಥೆಯ ಅಧ್ಯಕ್ಷ ರಾಮು ಅವರು ಹಲವು ಮಾಹಿತಿ ನೀಡಿದರು. ಈ.ಪಂ. ಕಾರ್ಯಪಾಲಕ ಇಂಜಿನಿ ಯರ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರಾಜು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.