ಸೋಮವಾರಪೇಟೆ, ಅ. 22: ವಿಜಯ ಬ್ಯಾಂಕ್ನ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಪೇಟೆ ಶಾಖೆ ವತಿಯಿಂದ ಶೈಕ್ಷಣಿಕ ಯೋಜನೆಯಡಿ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಯೋರ್ವಳನ್ನು ದತ್ತು ಪಡೆಯಲಾಯಿತು. ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಶಾಖೆಯಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಬೇಳೂರು ರಸ್ತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ, ಇಲ್ಲಿನ ದೇವಾಲಯ ರಸ್ತೆಯ ಪವಿತ್ರ ಅವರ ಪುತ್ರಿ ಎ.ಯು. ಧನ್ಯಾಳನ್ನು ದತ್ತು ಪಡೆಯಲಾಯಿತು. ಈಕೆಗೆ ಬ್ಯಾಂಕ್ನಿಂದಲೇ ಖಾತೆ ತೆರೆದು ಹತ್ತನೇ ತರಗತಿವರೆಗೆ ಪ್ರತಿ ವರ್ಷ ರೂ. 5 ಸಾವಿರ, ಪಿಯುಸಿ ವಿದ್ಯಾಭ್ಯಾಸದಲ್ಲಿ ಪ್ರತಿ ವರ್ಷ 10 ಸಾವಿರ ರೂಪಾಯಿ ಧನಸಹಾಯ ನೀಡಲಾಗುವದು ಎಂದು ಬ್ಯಾಂಕ್ನ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.
ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಈ ಹಿಂದೆ ಕೇವಲ 5 ಮಂದಿ ರೈತರಿಂದ ಪ್ರಾರಂಭವಾದ ವಿಜಯ ಬ್ಯಾಂಕ್ ಇಂದು ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಬೃಹತ್ತಾಗಿ ಬೆಳೆದಿದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಗ್ರಾಮೀಣ ಭಾಗದ ರೈತರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದರು. ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯುವಜನಾಂಗವೇ ಅಧಿಕವಿದ್ದು, ತ್ವರಿತ ಸೇವೆಯನ್ನು ನೀಡುತ್ತಿದೆ ಎಂದರು. ಬ್ಯಾಂಕಿಂಗ್ ವ್ಯವಹಾರಗಳ ಸರಳೀಕರಣದಿಂದಾಗಿ ಎಲ್ಲರಿಗೂ ಉಪಯೋಗವಾಗುತ್ತಿದೆ ಎಂದರು. ಈ ಸಂದರ್ಭ ಬ್ಯಾಂಕ್ನ ಹಿರಿಯ ಗ್ರಾಹಕರುಗಳಾದ ಬಿ.ಎಸ್. ಸುಂದರ್, ಬಿ.ಎಸ್. ಸದಾನಂದ್, ಸ್ಟ್ಯಾನಿ ರೊಜಾರಿಯೋ, ಗುರು ಮಲ್ಲೇಶ್, ಮಂಜುನಾಥ್ ಚೌಟ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಬ್ಯಾಂಕ್ ಸಿಬ್ಬಂದಿ ಮೃತ್ಯುಂಜಯ ಸೇರಿದಂತೆ ಇತರರು ಭಾಗವಹಿಸಿದ್ದರು.