ಮಡಿಕೇರಿ, ಡಿ. 18: ಆರ್ಥಿಕ ಸ್ವಾವಲಂಬನೆಯ ಕನಸು ಹೊತ್ತ ಮಹಿಳೆÉಯರ ಬದುಕನ್ನು ಹಾಳುಗೆಡಹುತ್ತಿರುವ ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಘಟಕ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ರಶೀದ, ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಸಂತ್ರಸ್ತ ಮಹಿಳೆಯರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯ ಕುಶಾಲನಗರ, ಮಡಿಕೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಅಮಾಯಕ ಮಹಿಳೆಯರಿಗೆ ದೊಡ್ಡ ಪ್ರಮಾಣದ ಬಡ್ಡಿ ದರಕ್ಕೆ ಸಾಲವನ್ನು ನೀಡುವದಲ್ಲದೆ, ಖಾಲಿ ಬಾಂಡ್ ಪೇಪರ್ ಮತ್ತು ಚೆಕ್‍ಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಪಡೆದ ಸಾಲದ ಕಂತನ್ನು ಪ್ರತಿವಾರ ಕಟ್ಟಿಸಿಕೊಳ್ಳುವ ಬಡ್ಡಿ ದಂಧೆಕೋರರು ಅದರ ವಸೂಲಾತಿಗೆ ಇನ್ನಿಲ್ಲದ ಉಪಟಳವನ್ನು ನೀಡುತ್ತಿದ್ದಾರೆ. ಹಣ ವಸೂಲಾತಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಗರ್ಭಿಣಿ ಸ್ತ್ರೀಯೊಬ್ಬರನ್ನು ತಮ್ಮ ಕಚೇರಿಯಲ್ಲೆ ಇರಿಸಿಕೊಂಡಂತಹ ಅಮಾನವೀಯ ಘಟನೆಗಳು ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ ಬಡ್ಡಿ ದಂಧೆ ಕೋರರು, ಮೀಟರ್ ದಂಧೆಕೋರರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವದು. ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ರಶೀದ ಎಚ್ಚರಿಕೆ ನೀಡಿದರು.

ಬಡ್ಡಿ ಹಣವನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಚೆಕ್‍ನ್ನು ಬಳಸಿ ವಕೀಲರಿಂದ ನೋಟಿಸ್ ನೀಡುವದು ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಿ ಬೆದರಿಸುವ ತಂತ್ರ ನಡೆಯುತ್ತಿದೆ.

ಸಣ್ಣ ಮೊತ್ತದ ಹಣವನ್ನು ಕೂಡ ಪಾವತಿಸಲಾಗದ ಹಲವು ಬಡ ಮಂದಿ ತಲೆಮರೆಸಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ. ಸಣ್ಣ ಸಾಲಕ್ಕೆ ಸ್ವಂತ ಮನೆಯನ್ನೆ ಬಡ್ಡಿ ದಂಧೆಕೋರರಿಗೆ ಬರೆದುಕೊಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಶಾಲನಗರದ ಅಸ್ಮಾ ಮಾತನಾಡಿ, ಕನಿಷ್ಟ ಬ್ಯಾಂಕ್ ಖಾತೆಗಳನ್ನು ಹೊಂದಿರದ ಅವಿದ್ಯಾವಂತ ಮಹಿಳೆಯರಿಗೆ ಅಧಿಕ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಅದರ ವಸೂಲಾತಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷೆ ಮಾಚಿಮಾಡ ವಾಣಿ, ಕುಶಾಲನಗರದ ಗೌರಿ, ಸೀಮಾ ಹಾಗೂ ಜೋರಾ ಉಪಸ್ಥಿತರಿದ್ದರು.