ಸೋಮವಾರಪೇಟೆ, ಮೇ 26: ಮಾದಾಪುರದ ಮಾರ್ಕೆಟ್ ರಸ್ತೆಯ ಮನೆಯೊಂದರಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಾದಾಪುರದ ನಿವಾಸಿ ಗಣೇಶ್ ಎಂಬವರ ಮನೆಗೆ ಆಗಾಗ್ಗೆ ಮೂವರು ಅಪರಿಚಿತರು ಆಗಮಿಸುತ್ತಿದ್ದು, ಕಳೆದ ನಾಲ್ಕೈದು ತಿಂಗಳ ಹಿಂದಿನಿಂದಲೇ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಮೈಸೂರಿನಿಂದ ಆಗಮಿಸಿದ ಮೂವರು ಗಣೇಶ್ ಅವರ ಮನೆಗೆ ತೆರಳಿದ ಸಂದರ್ಭ ಸ್ಥಳೀಯರು ಪ್ರಶ್ನಿಸಿ ವಿಚಾರಿಸಿದ್ದಾರೆ. ಈ ಸಂದರ್ಭ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಬೈಕ್‍ನ ದಾಖಲಾತಿ, ಮೋಟಾರ್ ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿಯನ್ನು ಕೇಳಿದ ಸಂದರ್ಭ ಇವರುಗಳ ಬಳಿ ಯಾವದೇ ದಾಖಲೆಗಳು ಇಲ್ಲದ್ದರಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಮೂವರನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಮತಾಂತರಕ್ಕೆ ತೆರೆಮರೆಯಲ್ಲಿ ಯತ್ನಿಸಲಾಗುತ್ತಿದೆ. ಬೇರೆ ಊರಿನಿಂದ ಬರುವ ವ್ಯಕ್ತಿಗಳು ಆಮಿಷಗಳನ್ನು ತೋರಿ ಮತಾಂತರ ನಡೆಸುತ್ತಿದ್ದಾರೆ. ಅಹಿತಕರ ಘಟನೆ ನಡೆಯುವ ಮೊದಲು ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.