ಮಡಿಕೇರಿ, ಜು. 7: ಕೊಡಗು ಪ್ರೆಸ್‍ಕ್ಲಬ್‍ನ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಎಂ.ಪಿ.ಕೇಶವ ಕಾಮತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಕೊಡಗು ಪ್ರೆಸ್‍ಕ್ಲಬ್‍ನ ವಿಶೇಷ ಸಾಮಾನ್ಯ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆಗೊಳಿಸ ಲಾಯಿತು. ಅಧ್ಯಕ್ಷರಾಗಿದ್ದ ಜಗದೀಶ್ ಬೆಳ್ಯಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಭೆಯಲ್ಲಿ ಕ್ಲಬ್‍ನ ಹಿರಿಯ ಉಪಾಧ್ಯಕ್ಷರಾಗಿದ್ದ ಎಂ.ಪಿ.ಕೇಶವ ಕಾಮತ್ ಅವರ ಹೆಸರನ್ನು ನಿರ್ದೇಶಕರಾದ ಬಿ.ಜಿ ಅನಂತಶಯನ ಅವರು ಸೂಚಿಸಿದಾಗ ಮತ್ತೋರ್ವ ನಿರ್ದೇಶಕÀ ರಫೀಕ್ ತೂಚಮಕೇರಿ ಅನುಮೋದಿಸಿದರು. ತೆರವಾದ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಸಂಸ್ಥೆಯ ಬೈಲಾದಂತೆ ಉಪಾಧ್ಯಕ್ಷರಾಗಿರುವ ಕಾಯಪಂಡ ಶಶಿ ಸೋಮಯ್ಯ ಆಯ್ಕೆಗೊಂಡರಲ್ಲದೆ, ಉಪಾಧ್ಯಕ್ಷರಾಗಿ ನಿರ್ದೇಶಕ ಎಸ್.ಗಣೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಜಗದೀಶ್ ಬೆಳ್ಯಪ್ಪ ಅವರ ರಾಜೀನಾಮೆ ನೀಡಿದ ಬಳಿಕ ಕೊಡಗು ಪ್ರೆಸ್‍ಕ್ಲಬ್‍ನ ಪ್ರಬಾರ ಅಧ್ಯಕ್ಷರಾಗಿ ಎಂ.ಪಿ. ಕೇಶವ ಕಾಮತ್ ಇದುವರೆಗೆ ಕಾರ್ಯನಿರ್ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷÀ ಎಂ.ಪಿ. ಕೇಶವ ಕಾಮತ್ ಅವರು ಇದುವರೆಗೂ ಕ್ಲಬ್‍ನ ಅಧ್ಯಕ್ಷರಾಗಿದ್ದವರು ಸಂಸ್ಥೆಯ ಪ್ರತಿಷ್ಠೆ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿದಿರುವ ಪರಂಪರೆಯನ್ನು ಮುಂದುವರೆಸುವದಾಗಿ ಭರವಸೆ ನೀಡಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವದಾಗಿಯೂ ತಿಳಿಸಿದರು. ಸಭೆಯಲ್ಲಿ ಕ್ಲಬ್‍ನ ಪದಾಧಿಕಾರಿಗಳಾದ ಜಗದೀಶ್ ಬೆಳ್ಯಪ್ಪ, ಅನಿಲ್ ಹೆಚ್.ಟಿ, ಉಳ್ಳಿಯಡ ಎಂ. ಪೂವಯ್ಯ , ಎಸ್.ಎಂ. ಮುಬಾರಕ್, ಡಾಟಿ ಪೂವಯ್ಯ, ನಂದ ಗುಜರ್, ಲೋಕೇಶ್ ಸಾಗರ್, ಬಿ.ಎನ್. ಮನುಶೆಣೈ ಇದ್ದರು. ಪ್ರ.ಕಾರ್ಯದರ್ಶಿ ಬಿ.ಸಿ. ದಿನೇಶ್ ಸ್ವಾಗತಿಸಿದರೆ, ನೂತನ ಉಪಾಧ್ಯಕ್ಷ ಎಸ್. ಗಣೇಶ್ ಕುಮಾರ್ ವಂದಿಸಿದರು.