ಮಡಿಕೇರಿ, ನ. 2 : ಪರವಾನಗಿ ಪಡೆಯದೆ ಅನಧಿಕೃತವಾಗಿ ಖಾಸಗಿ ಲೇವಾದೇವಿ ಮಾಡುವದು ಕಂಡುಬಂದರೆ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

“ಭದ್ರತಾ ಸಾಲಕ್ಕೆ ವಾರ್ಷಿಕ ಶೇ.14 ರಷ್ಟು ಮತ್ತು ಭದ್ರತಾ ರಹಿತ ಸಾಲಕ್ಕೆ ವಾರ್ಷಿಕ ಶೇ. 16 ರಷ್ಟು ಮಾತ್ರ ಬಡ್ಡಿ ವಿಧಿಸಲು ಅವಕಾಶವಿದ್ದು, ಈ ದರಕ್ಕಿಂತ ಹೆಚ್ಚಿನ ಬಡ್ಡಿ ದರ ವಿಧಿಸುವದು ಕಂಡುಬಂದರೆ ಕೂಡಲೇ ಜಿಲ್ಲಾಡಳಿತ, ಸಹಕಾರ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ಒದಗಿಸುವಂತೆ ಅವರು ಕೋರಿದರು.”

ಖಾಸಗಿ ಲೇವಾದೇವಿದಾರರು ಸಾರ್ವಜನಿಕರಿಗೆ ಕಿರುಕುಳ ನೀಡುವದು ಕಂಡುಬಂದಲ್ಲಿ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ. ಪರವಾನಗಿ ಪಡೆಯದೇ ಅನಧಿಕೃತವಾಗಿ ನಡೆಸುವ ಯಾವದೇ ಲೇವಾದೇವಿ, ಹಣಕಾಸು ಸಂಸ್ಥೆ, ಗಿರವಿ, ಚೀಟಿ ಸಂಸ್ಥೆಗಳೊಡನೆ ಸಾರ್ವಜನಿಕರು ಸಹ ಯಾವದೇ ವ್ಯವಹಾರ ನಡೆಸಬಾರದು ಎಂದು ಸಲಹೆ ಮಾಡಿದರು.

ಮಹಿಳೆಯರು, ಮಕ್ಕಳು, ಪರಿಶಿಷ್ಟರು, ಹಿಂದುಳಿದವರು ಹೀಗೆ ಎಲ್ಲಾ ಜನರಿಗೂ ಸರ್ಕಾರದ ಒಂದಲ್ಲ ಒಂದು ರೀತಿಯ ಸೌಲಭ್ಯಗಳು ಇವೆ. ಇವುಗಳನ್ನು ಬಳಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯದೇ ಸಹಕಾರ ಸಂಘಗಳ ಮೂಲಕ ಸಾಲವನ್ನು ಪಡೆಯುವಂತಾಗಬೇಕು. ಈ ಸಂಬಂಧ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಿರ್ದೇಶನ ನೀಡಿದರು.

ಸಹಕಾರ ಇಲಾಖೆಯ ಉಪ ನಿಬಂಧಕ ವಿಜಯಕುಮಾರ್ ಅವರು ಸಹಕಾರ ಇಲಾಖೆಯ ಕಾಯ್ದೆಯನ್ನು ಉಲ್ಲಂಘಿಸಿ ಅಧಿಕ ಬಡ್ಡಿ ವಸೂಲಿ ಮಾಡುವ, ಅನಧಿಕೃತವಾಗಿ ಲೇವಾದೇವಿ ವ್ಯವಹಾರ ಮಾಡುವದು ಕಂಡುಬಂದಲ್ಲಿ ದೂರನ್ನು ನೀಡಬಹುದಾಗಿದೆ ಎಂದರು.

ಲೇವಾದೇವಿ, ಹಣಕಾಸು ಸಂಸ್ಥೆಗಳು, ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961ರ ಪ್ರಕರಣ 5 ರಡಿ ಮತ್ತು ಗಿರಿವಿದಾರರು ಕರ್ನಾಟಕ ಗಿರಿವಿದಾರರ ಕಾಯ್ದೆ 1961ರ ಪ್ರಕರಣ 3ರಡಿ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ಚೀಟಿ ವ್ಯವಹಾರ ನಡೆಸಲು ಚೀಟಿ ನಿಬಂಧಕರಿಂದ ಅನುಮತಿ ಪಡೆದಿರಬೇಕು ಎಂದು ಸಹಕಾರ ನಿಬಂಧಕರು ತಿಳಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಕಾರ ಸಂಘಗಳ ನಿಬಂಧಕರು, ಉಪ ನಿಬಂಧಕರು ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರನ್ನು ದಾಖಲಿಸಬಹುದಾಗಿದೆ ಎಂದರು.

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ರಾಮಪ್ಪ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕÀ ಡಾ.ಸಿ.ನಾಗರಾಜು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಡಿವೈಎಸ್‍ಪಿ ಛಬ್ಬಿ, ಸಹಕಾರ ಇಲಾಖೆಯ ವ್ಯವಸ್ಥಾಪಕÀ ಮೋಹನ್ ಇತರರು ಹಲವು ಮಾಹಿತಿ ನೀಡಿದರು.