ಸೋಮವಾರಪೇಟೆ, ನ. 17: ತೋಟ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಬಗ್ಗೆ ವರದಿಯಾಗಿದೆ.ಸಮೀಪದ ಸಿದ್ದಲಿಂಗಪುರ ಹಾಗೂ ಅರಕಲಗೋಡು ತಾಲೂಕಿನ ಕೇರಳಾಪುರ ಹಾಗೂ ಬಸವನಹಳ್ಳಿ ಗ್ರಾಮದವರೆನ್ನಲಾದ ಲಕ್ಷ್ಮಿ, ಸುಮಿತ್ರ, ಶೈಲಜ, ಮಂಜುಳ, ಸರಸ್ವತಿ, ಲಕ್ಷ್ಮಮ್ಮ, ನಾಗಮ್ಮ, ಕುಮಾರಿ, ಗೌರಮ್ಮ, ಪ್ರೇಮ, ಚೆಂಗಮ್ಮ, ವಿಶಾಲಾಕ್ಷಿ, ಲಕ್ಷ್ಮಮ್ಮ, ಜಯಮ್ಮ, ವನಜಮ್ಮ, ಲಕ್ಷ್ಮಿ, ಮಣಿಯಮ್ಮ ಹಾಗೂ ದೇವಮ್ಮ ಎಂಬವರುಗಳೇ ಸಣ್ಣಪುಟ್ಟ ಗಾಯಗಳ ಮೂಲಕ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು.
ಅಂಜನ್ಕುಮಾರ್ ಅಲಿಯಾಸ್ ಧರ್ಮ ಎಂಬವರು ಸಿದ್ದಲಿಂಗಪುರ ಹಾಗೂ ಅರಕಲಗೋಡು ತಾಲೂಕಿನ ಕೇರಳಾಪುರ ಹಾಗೂ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಕೂಲಿ ಕಾರ್ಮಿಕರನ್ನು ಟಾಟಾ ಏಸ್ ವಾಹನದಲ್ಲಿ ಕೂರಿಸಿ ಕೊಂಡು ಜಂಬೂರು ತೋಟಕ್ಕೆ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಸಂಜೆ ಹಿಂತಿರುಗುತ್ತಿದ್ದ ಸಂದರ್ಭ ತಣ್ಣೀರುಹಳ್ಳ ಗ್ರಾಮದ ಡಿ’ಸಿಲ್ವಾರವರ ಮನೆಯ ತಿರುವಿನಲ್ಲಿ ವಾಹನ ಅಪಘಾತಕ್ಕೀಡಾಗಿದೆ. ಅಪಘಾತಕ್ಕೆ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆ ಕಾರಣ ಎನ್ನಲಾಗಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.