*ಗೋಣಿಕೊಪ್ಪಲು, ಅ. 5: 38ನೇ ವರ್ಷದ ಜನೋತ್ಸವದ 4ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಇಲ್ಲಿನ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಮೈಸೂರಿನ ನಿರಂತರÀ ಕಲಾ ವೇದಿಕೆ ಸದಸ್ಯರು ನಡೆಸಿಕೊಟ್ಟ ಹಾಸ್ಯ ಮ್ಯಾಜಿಕ್ ನೃತ್ಯಗಳು ಜನರ ಮನಸೆಳೆಯಿತು. ಟಿ.ವಿ. 9 ಖ್ಯಾತಿಯ ಮಿಮಿಕ್ರಿ ಗೋಪಿ ನಡೆಸಿಕೊಟ್ಟ ಹಿರಿಯ ಚಲನಚಿತ್ರ ಕಲಾವಿದರ ಹಾಗೂ ಪ್ರಸಿದ್ಧ ರಾಜಕಾರಣಿಗಳ ಧ್ವನಿಯನ್ನು ಅನುಕರಿಸಿದ್ದು ಪ್ರೇಕ್ಷಕರನ್ನು ರಂಜಿಸಿತು.

ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನಿರಂತರ ಕಲಾ ವೇದಿಕೆಯ ಯುವ ಪ್ರತಿಭೆಗಳು ರಂಜಸಿದರೆ, ಜಗ್ಗು ಜಾದೂಗಾರ್ ಅವರ ಜಾದೂ ಕಾರ್ಯಕ್ರಮ ನೀರಸ ಪ್ರತಿಕ್ರಿಯೆ ಕಂಡಿತು. ಜಾದೂವಿನ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಪ್ರಾಥಮಿಕ ಹಂತದ ಜಾದೂ ಪ್ರದರ್ಶನ ನೀಡಿ ಕಲಾವಿದರ ಮನಸೆಳೆಯುವಲ್ಲಿ ಸೋತಿತು.

ರಂಗೋಲಿ ಧಾರಾವಾಹಿ ಖ್ಯಾತಿಯ ಕಲಾವಿದ ರವಿ ಅವರ ಹಾಸ್ಯ ತುಣುಕುಗಳು ಚಲನಚಿತ್ರದಲ್ಲಿ ಬದಲಾವಣೆಗೊಂಡ ನೃತ್ಯ ಅಣುಕು ಪ್ರದರ್ಶನ ಜನರನ್ನು ನಗಿಸಿತು. ಸಂಜೆ 6.30ಕ್ಕೆ ನಡೆದ ಸ್ಥಳೀಯ ಪ್ರತಿಭೆಗಳ ಅನಾವರಣದಲ್ಲಿ ಧರಣಿ ಸಂಜು ಅವರು ಚಲನಚಿತ್ರ ಗೀತೆಯ ‘ಕಾಣದಂತೆ ಮಾಯವಾದನು’ ಗೀತೆಗೆ ನೃತ್ಯ ಮಾಡಿ ಗಮನ ಸೆಳೆದರು.

ದೇವರ ಕಾರ್ಯದಲ್ಲಿ ರಾಜಕೀಯ ಬೆರೆಸದೆ ಭಕ್ತಿ ಭಾವದಿಂದ ಆಚರಿಸುವಲ್ಲಿ ಸಮಿತಿ ಸದಸ್ಯರು ಒಂದಾಗಬೇಕು. ಪೋಷಕರು ಬೆಳೆಯುವ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬಿತ್ತಬೇಕು. ಪೋಷಕರು ತಮ್ಮ ಮಕ್ಕಳು ವೈದ್ಯರು ಇಂಜಿನಿಯರ್ ಆಗಬೇಕೆಂಬ ಕನಸು ಕಾಣುವ ಮೊದಲು ಉತ್ತಮ ಪ್ರಜೆಯಾಗಿ ಮಾನವತೆಯನ್ನು ಬೆಳೆಸಿಕೊಳ್ಳುವ ಗುಣ ಹೊಂದಿರಬೇಕು ಎಂಬಂತಹ ಭಾವನೆ ಹೊಂದಿರಬೇಕು ಎಂದು ಕೊಡಗು ವಾರ್ತೆ ಸಂಪಾದಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ತಿಳಿಸಿದರು.

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ. ಗೋಣಿಕೊಪ್ಪ ಉಪನಿರೀಕ್ಷಕ ಗೋವಿಂದರಾಜ್, ವೈದ್ಯರಾದ ಚಂದ್ರಶೇಖರ್, ಶಾರದಾಂಬ, ದಸರಾ ಸಮಿತಿ ಅಧ್ಯಕ್ಷ ಅಶ್ರಫ್, ಉದ್ಯಮಿ ಉಂಬಾಯ್ ಉಪಸ್ಥಿತರಿದ್ದರು.