ಗೋಣಿಕೊಪ್ಪಲು, ಜು. 7: ಗೋಣಿಕೊಪ್ಪಲಿನ ರೋಟರಿ ಸಂಸ್ಥೆಗೆ ಟಿ.ಯು. ನರೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೂನ್ 30 ರಂದು ಪದವಿ ಪ್ರದಾನ ಸಮಾರಂಭ ನೆರವೇರಿತು.

ಮಾಜಿ ಜಿಲ್ಲಾ ಗವರ್ನರ್ ಆರ್. ಕೃಷ್ಣ ಹಿಂದಿನ ಅಧ್ಯಕ್ಷೆ ಜಮುನ ತಿಮ್ಮಯ್ಯ ಅವರಿಂದ ಟಿ.ಯು. ನರೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದ್ಮಾ ಅವರಿಂದ ಕೆ.ಬಿ. ನವೀನ್, ಕಾರ್ಯದರ್ಶಿ ಸ್ಥಾನ ಪಡೆದರು.

ಸೇವೆಯ ಕುರಿತು ಮಾತನಾಡಿದ ಕೃಷ್ಣ ಅವರು ಸೇವಾ ಮನೋಭಾವ ಮಹಾಭಾರತದ ಕರ್ಣನಂತೆ ವಿಶಾಲವಾಗಿರಬೇಕು ಎಂದರು. ಮತ್ತೊಬ್ಬರ ಸಮಸ್ಯೆಗೆ ತುಡಿತ ಹೇಗಿರಬೇಕೆಂದು ಆಣಿಯ ಹೊಡೆತಕ್ಕೆ ಸಿಲುಕಿ ಮೂರು ವರುಷ ಒಂದು ಹಲಗೆಯಲ್ಲೇ ಅಂಟಿಬಿಟ್ಟಿದ್ದ ಒಂದು ಹಲ್ಲಿಯೊಂದಿಗೆ ಅದರ ಸಂಗಾತಿ ಮೂರು ವರ್ಷ ಸ್ಥಳಕ್ಕೇ ಆಹಾರ ನೀಡುತ್ತಿದ್ದ ಕರುಣಾಮಯ ಉದಾಹಣೆಯೊಂದಿಗೆ ವಿವರಿಸಿದರು.

ಅಸಿಸ್ಟೆಂಟ್ ಗವರ್ನರ್ ಡಾ. ಸಿ.ಆರ್. ಪ್ರಶಾಂತ್ ಮಾತನಾಡಿ, ಜಿಲ್ಲಾ ಯೋಜನೆಗಳ ಯಶಸ್ಸಿಗೆ ದುಡಿಯುವಂತೆ ಮನವಿ ಮಾಡಿದರು. ಜೋನಲ್ ಲೆಫ್ಟಿನೆಂಟ್ ಪಿ.ಬಿ. ಪೂಣಚ್ಚ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಸಿ.ಪಿ. ಬೆಳ್ಯಪ್ಪ ಹಾಗೂ ಶಾಂತಿ ಮಾಚಯ್ಯ ಅವರನ್ನು ಗೌರವಾನ್ವಿತ ಸದಸ್ಯರಾಗಿ ನಾಮಕರಣ ಮಾಡಲಾಯಿತು.

ಮಾಜಿ ಅಧ್ಯಕ್ಷರುಗಳಾದ ಡಾ. ಆಶಿಕ್ ಚೆಂಗಪ್ಪ, ಡೀನಾ, ರೀಟಾ ದೇಚಮ್ಮ, ಇಮ್ಮಿ ಉತ್ತಪ್ಪ, ಡಾ. ಕುಶಾಲಪ್ಪ ಹಾಗೂ ರಾಮಕೃಷ್ಣ ಹೆಗ್ಡೆ ಮತ್ತು ಶಾಂತಿ ಮಾಚಯ್ಯ ಪರಿಚಯ ಮಾಡಿದರು.