ಕುಶಾಲನಗರ, ಅ. 31: ಮುಳ್ಳು ಸೋಗೆಯ ಕೋಣಮಾರಿಯಮ್ಮ ದೇವಿಯ 14ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಸೋಮವಾರ ನೆರವೇರಿತು.

ಶ್ರೀ ಕೋಣಮಾರಿಯಮ್ಮ ದೇವತಾ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪೂಜಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಗ್ಗೆ ಮುಳ್ಳು ಸೋಗೆಯ ಬಳಿ ಕಾವೇರಿ ನದಿಯಿಂದ ದೇವಿಯ ವಿಗ್ರಹದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕಳಸ ತಂದು ಪ್ರತಿಷ್ಠಾಪಿಸಲಾಯಿತು. ನಂತರ ಗಣಪತಿ ಹೋಮ, ಪೂಜಾ ವಿಧಿವಿಧಾನಗಳ ಬಳಿಕ ಮಧ್ಯಾಹ್ನ ದೇವಿಗೆ ಮಹಾಮಂಗಳಾರತಿ ಬೆಳಗಲಾಯಿತು. ಅರ್ಚಕರಾದ ಕುಳಯ್ಯ ಹಾಗೂ ಶಿವಣ್ಣ ಪೂಜಾ ವಿಧಿ ನೆರವೇರಿಸಿದರು.

ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸರದಿ ಸಾಲಿನಲ್ಲಿ ನಿಂತು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ದೃಶ್ಯ ಕಂಡುಬಂತು. ನೆರೆದಿದ್ದ ಭಕ್ತಾದಿಗಳಿಗೆ ಸಮಿತಿ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವತಾ ಸೇವಾ ಸಮಿತಿಯ ಅಧ್ಯಕ್ಷ ಎಂ.ಎಸ್. ಶಿವಾನಂದ, ಉಪಾಧ್ಯಕ್ಷ ಎಂ. ಮಂಜುನಾಥ್, ಕಾರ್ಯದರ್ಶಿ ಆರ್.ಸುರೇಶ್, ಸಹ ಕಾರ್ಯದರ್ಶಿ ಎಸ್.ಜೆ. ಸತೀಶ್‍ಕುಮಾರ್, ಖಜಾಂಚಿ ಹೆಚ್.ಜೆ. ಲೋಕೇಶ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.