ಹುತ್ತರಿ ಹಬ್ಬ ಕೊಡಗಿನಲ್ಲಿ ಎಲ್ಲಿ ನೋಡಿದರೂ ಹುತ್ತರಿ ಸಡಗರ, ಮಕ್ಕಳಿಗೆ ಪಟಾಕಿ ಸಿಡಿಸುವ ಕಾತರ, ಎಲ್ಲಿಲ್ಲದ ಉತ್ಸಾಹ.
ಹುತ್ತರಿ ಎಂದರೆ ರೈತರು ತಾವು ವರ್ಷಪೂರ್ತಿ ಬೆಳೆದ ಧಾನ್ಯಲಕ್ಷ್ಮಿಯನ್ನು ತಮ್ಮ ಮನೆಗೆ ತಂದು ಪೂಜಿಸುವ ಒಂದು ಆಚರಣೆ. ಈ ಧಾನ್ಯಲಕ್ಷ್ಮಿಯ ಪೂಜೆಯನ್ನು ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಗಳಿಂದ, ಕ್ರಮಗಳಿಂದ, ಆಚಾರ ವಿಚಾರಗಳಿಂದ, ಹೆಸರಿನಿಂದ ಬೇರೆ ಬೇರೆ ಕಾಲಗಳಲ್ಲಿ ಆಚರಿಸಲಾಗುತ್ತದೆ. ಕೊಡಗಿನಾದ್ಯಂತ ಈ ಹಬ್ಬವನ್ನು ಏಕಕಾಲಕ್ಕೆ ನವೆಂಬರ್ ಅಥವಾ ಡಿಸಂಬರ್ ತಿಂಗಳಿನಲ್ಲಿ ಬರುವ ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯಂದು ಹುತ್ತರಿ ಹಬ್ಬವೆಂದು ಆಚರಿಸಲಾಗುತ್ತದೆ. (ಹುತ್ತರಿ ಎಂದರೆ ಕೊಡವ ಭಾಷೆಯಲ್ಲಿ ಪುತ್ತರಿ ಪುದಿಯ-ಅರಿ ಹೊಸ ಅಕ್ಕಿ ಎಂದರ್ಥ)
ಕೊಡಗಿನಲ್ಲಿ ಆಚರಿಸಲಾಗುವ ಕೆಲವು ಹಬ್ಬಗಳು ಪ್ರತ್ಯೇಕ ಜಾತಿ, ಧರ್ಮ, ಜನಾಂಗಕ್ಕೆ ಮಾತ್ರ ಸೀಮಿತವಾಗಿರುವದನ್ನು ಕಾಣಬಹುದಾಗಿದೆ. ಆದರೆ ಹುತ್ತರಿ ಹಬ್ಬ ಯಾವದೇ ಜಾತಿ, ಧರ್ಮ, ಜನಾಂಗ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬೆರೆತು ಆಚರಿಸುವ ಹಬ್ಬವೆಂದು ಹೆಸರುವಾಸಿಯಾಗಿದೆ.
ಹುತ್ತರಿ ಹಬ್ಬ ಬೇರೆ ಹಬ್ಬಗಳಂತೆ ಒಂದು ದಿನಕ್ಕೆ ಮಾತ್ರ ಸೀಮಿತವಾದ ಹಬ್ಬವಲ್ಲ. ಇದು 10-12 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಆಚÀರಿಸಲ್ಪಡುತ್ತದೆ.
ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ನಿಗದಿಪಡಿಸುವ ಒಂದು ವಿಶೇಷ ಕ್ರಮವಿದೆ. ಕೊಡಗಿನ ಕುಲದೈವವೆಂದೇ ಪ್ರಸಿದ್ಧಿ ಪಡೆದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಹುತ್ತರಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ನಿಗದಿಪಡಿಸಿದ ದಿನದಂದು ಹಿಂದಿನ ಆಚರಣೆಯಂತೆ ಅದಕ್ಕೆ ಸಂಬಂಧಿಸಿದ ಕುಟುಂಬಸ್ಥರಿಂದ ಗುರುತಿಸಲ್ಪಟ್ಟವರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಜೋತಿಷ್ಯಶಾಸ್ತ್ರದ ಸಹಾಯದಿಂದ ದಿನ, ಸಮಯ, ಘಳಿಗೆಯನ್ನು ನಿಶ್ಚಯಿಸುತ್ತಾರೆ. ಅದರಂತೆ ಆ ದಿನ ಸಮಯಕ್ಕೆ ಸರಿಯಾಗಿ ಮೊದಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಕೃತಿಕಾ ನಕ್ಷತ್ರದಂದು ಹುತ್ತರಿ ಕಲಾಡ್ಚ ಹಬ್ಬವನ್ನು ನಡೆಸಲಾಗುತ್ತದೆ. ಅನಂತರ ನಿಗದಿತ ಸುಮುಹೂರ್ತದಲ್ಲಿ ರೈತರು ಬೆಳೆದ ಭತ್ತದ ತೆನೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಕತ್ತರಿಸಿ ತಂದು ದೇವಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.
ಈ ಹಬ್ಬಕ್ಕೆಂದೇ ವಿಶೇಷ ತಯಾರಿ ನಡೆಸಲಾಗುತ್ತದೆ. ಹುತ್ತರಿ ಹಬ್ಬದ ಮೂರು ದಿನ ಮುಂಚಿತವಾಗಿ ಗ್ರಾಮಗಳ ಮಂದ್ ( ಕೋಲಾಟಕ್ಕೆಂದೇ ನಿಗದಿಪಡಿಸಿದ ಸ್ಥಳ) ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಊರಿನ ಪುರುಷರು ಸೇರಿ ದೇವರ ಹೆಸರಿನಲ್ಲಿ ಕೋಲಾಟ ನಡೆಸುವ ಕ್ರಮವಿದೆ. ಹುತ್ತರಿ ಹಬ್ಬದಂದು ತೆನೆ ತೆಗೆಯುವ ಸಮಯಕ್ಕೆ ದೇವರ ನೈವೇದ್ಯಕ್ಕೆಂದು ತಂಬಿಟ್ಟು ಎಂಬ ವಿಶೇಷ ತಿನಿಸು ತಯಾರಿಸಲಾಗುತ್ತದೆ. ಇದಕ್ಕೆ ಹುರಿದ ಕುಸಲಕ್ಕಿಯ ಹುಡಿ, ಬಾಳೆ ಹಣ್ಣು, ಎಳ್ಳು, ಹುರಿ ಗÀಡಲೆ, ಏಲಕ್ಕಿ ಪುಡಿ, ಬೆಲ್ಲದ ಜೋನಿಯೊಂದಿಗೆ ಸೇರಿಸಿ ಉಂಡೆಮಾಡಿ ಇಡಲಾಗುವುದು. ಹುತ್ತರಿ ಹಬ್ಬಕ್ಕೆ ಆಗಮಿಸುವ ಬಂಧು ಮಿತ್ರರಿಗೆ, ಸ್ನೇಹಿತರಿಗೆ ಎಲ್ಲರಿಗೂ ಇದು ಬಹಳ ಪ್ರಿಯವಾದ ತಿನಿಸು ಎಂದೇ ಪ್ರಸಿದ್ಧಿ ಪಡೆದಿದೆ.
ಧಾನ್ಯಲಕ್ಷ್ಮಿಯ ಪೂಜೆಯ ಅನಂತರ ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಪದ್ಧತಿಯಂತೆ 5 ಬಗೆಯ ಮರದ ಎಲೆಯ ಸುರುಳಿ ಮಾಡಿರುವ ಮಧ್ಯೆ ಈ ತೆನೆಯನ್ನು ಸೇರಿಸಿ ಕಟ್ಟಲಾಗುತ್ತದೆ. ಈ ತೆನೆಯನ್ನು ಮನೆ, ದೇವಾಲಯ, ದೇವಸ್ಥಾನ, ವಾಹನ, ತೋಟ, ಅಂಗಡಿ ಸೇರಿದಂತೆ ಮನುಷ್ಯನ ಅವಶ್ಯಕತೆಗಳ ಸ್ಥಳಗಳಲ್ಲಿ ಶುಭ ಸೂಚಕವಾಗಿ ಕಟ್ಟಲಾಗುತ್ತದೆ. ಹುತ್ತರಿ ಹಬ್ಬದಂದು ಸಾಮಾನ್ಯವಾಗಿ ಎಲ್ಲರೂ ಸಸ್ಯಾಹಾರದ ಅಡುಗೆಯನ್ನೆ ಅದ್ಧೂರಿಯಿಂದ ಸಿದ್ಧಪಡಿಸುತ್ತಾರೆ. ಹುತ್ತರಿ ಹಬ್ಬಕ್ಕೆಂದು ದೂರದ ಊರುಗಳಲ್ಲಿ ನೌಕರಿಯಲ್ಲಿರುವವರು, ಬೇರೆ ಬೇರೆ ಕಾರಣಗಳಿಂದ ಕುಟುಂಬ ವರ್ಗದಿಂದ ದೂರವಿರುವವರು ತಮ್ಮ-ತಮ್ಮ ಮನೆಗಳಿಗೆ ಬಂದು ಎಲ್ಲರೂ ಒಟ್ಟಿಗೆ ಸೇರಿ ಹಬ್ಬ ಆಚರಿಸುವದು ರೂಢಿ.