ಮಡಿಕೇರಿ, ನ. 3: ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಪೈಕಿ ಭಾಗಮಂಡಲದ ಬಸ್ ತಂಗುದಾಣದ ಬಳಿ ಶೌಚಾಲಯದ ನಿರ್ಮಾಣ ಕಾಮಗಾರಿಗೆ ರೂ. 13.40 ಲಕ್ಷಗಳಿಗೆ ಅನುಮೋದನೆಯಾಗಿದ್ದು, ಅನುಮೋದಿತ ಅಂದಾಜು ಪಟ್ಟಿಯಲ್ಲಿ ಕಾಂಕ್ರೀಟ್ ಮೇಲ್ಚಾವಣಿ ಇದೆ. ಆದರೆ ಜಾತ್ರಾ ಪ್ರಯುಕ್ತ ತಲಕಾವೇರಿಗೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ತಾತ್ಕಾಲಿಕವಾಗಿ ಶೀಟ್ ರೂಫಿಂಗ್ ಅಳವಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಅನುಮೋದಿತ ಅಂದಾಜು ಪಟ್ಟಿಯಂತೆ ಕಾಂಕ್ರೀಟ್ ಮೇಲ್ಚಾವಣಿ ಅಳವಡಿಸಲಾಗುವದು ಎಂದು ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಆರ್.ಜಿ. ಸಚಿನ್ ಸ್ಪಷ್ಟೀಕರಣ ನೀಡಿದ್ದಾರೆ.

ಹಾಗೆಯೇ ತಿತಿಮತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಆಶ್ರಮ ಶಾಲೆಯ ಕಾಮಗಾರಿಗೆ ಈ ಹಿಂದೆ ಸರಬರಾಜು ಮಾಡಿದ್ದ ಸಿ.ಸಿ. ಬ್ಲಾಕ್‍ಗಳನ್ನು ಹಿಂತಿರುಗಿಸಲಾಗಿದೆ. ಬೇರೆ ಉತ್ತಮ ಗುಣಮಟ್ಟದ ಸಿ.ಸಿ. ಬ್ಲಾಕ್‍ಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಯಾವದೇ ಕಳಪೆಯಾಗಿರುವದಿಲ್ಲ ಎಂದು ಸಚಿನ್ ತಿಳಿಸಿದ್ದಾರೆ.